ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ಉಮಂಗ್-2022
![ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ಉಮಂಗ್-2022](https://thecanarapost.com/wp-content/uploads/2022/09/IMG_20220904_093905__01-850x560.jpg)
![](https://thecanarapost.com/wp-content/uploads/2022/09/IMG_20220904_093905__01.jpg)
ಮಂಗಳೂರು, ಸೆ 05, 2022: ಕ್ರೀಡೆಯು ತನು ಮನವನ್ನು ಗಟ್ಟಿಗೊಳಿಸುತ್ತದೆ. ಪಠ್ಯದ ಚಟುವಟಿಕೆಗಳಲ್ಲಿ ಕ್ರೀಡೆಯು ಪ್ರಧಾನ ಪಾತ್ರವನ್ನು ವಹಿಸುವುದಲ್ಲದೆ, ಶಿಕ್ಷಣಕ್ಕೆ ಪೂರಕವಾಗಿಯೂ ಸಹಕರಿಸುತ್ತದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಒಟ್ಟಾಗಿಯೆ ವಿದ್ಯಾರ್ಥಿಯ ಸರ್ವಾಂಗೀಣ ಪ್ರಗತಿಗೆ ಉತ್ತೇಜನವನ್ನು ನೀಡುತ್ತದೆ ಎಂದು ವಿಶ್ವ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ ವಿಜೇತೆ ಕುಮಾರಿ ವೆನಿಜಿಯ ಎ ಕಾರ್ಲೊ ವಿವರಿಸಿದರು.
ಅವರು ಸ್ನಾತಕೋತ್ತರ ವಿಭಾಗಗಳ ವತಿಯಿಂದ ಭಾನುವಾರ (ಸೆ 04) ರಂದು ಕಾಲೇಜಿನ ಮೈದಾನದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ, ಪಥಸಂಚಲನದ ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದರು.
![](https://thecanarapost.com/wp-content/uploads/2022/09/IMG_20220904_092054.jpg)
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಭಾಷಿಣಿ ಶ್ರೀವತ್ಸ ಜೀವನದಲ್ಲಿ ಶಿಸ್ತು ಮತ್ತು ದೈಹಿಕ ಕ್ಷಮತೆಗೆ ಮೂಲಮಂತ್ರ ಕ್ರೀಡೆಯೊಂದೆ. ಚೆಂಡಿನ ಮೂಲಕ ಪುಟಿಯುವ ಶಕ್ತಿಯನ್ನು, ಎತ್ತರಕ್ಕೆ ಜಿಗಿಯುವುದನ್ನು, ದೂರದೃಷ್ಟಿಯನ್ನು, ಕ್ರಿಕೆಟ್ ಮೂಲಕ ಗುಂಪಿನಲ್ಲಿ ಸಾಧಿಸುವುದನ್ನು, ರಿಲೆಯ ಮೂಲಕ ಸಹಕರಿಸುವುದನ್ನು ಕಲಿತಿದ್ದೇವೆ. ಕ್ರೀಡೆ ಮನಸ್ಸಿಗೆ ಉಲ್ಲಾಸವನ್ನು ನೀಡುವುದು ಮಾತ್ರವಲ್ಲ ಜೀವನದ ಕಲೆಯನ್ನು ಅರುಹುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಸ್ನಾತಕೋತ್ತರ ವಾಣಿಜ್ಯ ಮತ್ತು ಎಂ.ಬಿ.ಎ (ಐಬಿ) ವಿಭಾಗದ ಸಂಯೋಜಕರಾದ ಡಾ. ಜಗದೀಶ ಬಿ, ತುಳು ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ. ಮಾಧವ ಎಂ.ಕೆ, ಕೊಂಕಣಿ ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ. ಬಿ ದೇವದಾಸ ಪೈ, ದೈಹಿಕ ಶಿಕ್ಷಕರಾದ ಅಶ್ವಥ್ ಸಾಲಿಯಾನ್ ಉಪಸ್ಥಿತರಿದ್ದರು. ವಾಣಿಜ್ಯ, ತುಳು, ಕೊಂಕಣಿ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.