ಅಂಬೇಡ್ಕರ್ ಅವರಿಂದ ಎಲ್ಲಾ ಕಾಲಕ್ಕೂ , ಎಲ್ಲರಿಗೂ ಸೌಲಭ್ಯ ನೀಡುವ ಸಂವಿಧಾನ ರಚನೆ : ಸಚಿವ ಅಂಗಾರ

 ಅಂಬೇಡ್ಕರ್ ಅವರಿಂದ ಎಲ್ಲಾ ಕಾಲಕ್ಕೂ , ಎಲ್ಲರಿಗೂ ಸೌಲಭ್ಯ ನೀಡುವ ಸಂವಿಧಾನ ರಚನೆ : ಸಚಿವ ಅಂಗಾರ
Share this post

ಉಡುಪಿ, ಏ 14, 2022: ಡಾ.ಬಿ.ಆರ್.ಅಂಬೇಡ್ಕರ್ ಅವರು ಅವರು ತಾನು ಅನುಭವಿಸಿದ ಬಡತನ, ಅಸಮಾನತೆಯ ನೋವುಗಳನ್ನು ಅರಿತು, ಸಂವಿಧಾನ ರಚನಾ ಸಮಯದಲ್ಲಿ , ದೇಶದಲ್ಲಿ ಎಲ್ಲಾ ಕಾಲಕ್ಕೂ ಪ್ರತಿಯೊಬ್ಬರಿಗೂ ಅನುಕೂಲವಾಗುವಂತಹ ಸೌಲಭ್ಯಗಳು ದೊರೆಯುವ ರೀತಿಯಲ್ಲಿ ಸಂವಿಧಾನವನ್ನು ರಚನೆ ಮಾಡಿದ್ದಾರೆ ಎಂದು ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಶಾಸಕ ಎಸ್.ಅಂಗಾರ ಹೇಳಿದರು. 

ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಆವರಣದಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಪ.ಜಾತಿ ಮತ್ತು ವರ್ಗಗಳ ಸಂಘಟನೆಗಳು ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ.ಬಿ.ಆರ್. ಅಂಬೇಡ್ಕರ್ ಅವರ 131 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶ್ವದ ಅನೇಕ ರಾಷ್ಟçಗಳು ಸಂವಿಧಾನ ರಚನೆ ಮಾಡಿಕೊಂಡಿದ್ದರೂ ಸಹ , ಇಡೀ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ಭಾರತದ್ದು ಆಗಿದೆ. ಸಂವಿಧಾನ ರಚನೆ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಯಾವುದೇ ವ್ಯಕ್ತಿ ಅಥವಾ ವೈಯಕ್ತಿಕ ಹಿತಾಸಕ್ತಿಯಿಲ್ಲದೇ ದೇಶದ ಹಾಗೂ ಪ್ರತಿ ಪ್ರಜೆಯ ಹಿತವನ್ನು ಅಲೋಚಿಸಿ ರಚನೆ ಮಾಡಿದ್ದಾರೆ. ಸಂವಿಧಾನ ನೀಡಿರುವ ಸೌಲಭ್ಯಗಳನ್ನು ಮಾತ್ರ ಅನುಭವಿಸಿದೇ ಅದರಲ್ಲಿನ ನಿಯಮಗಳನ್ನು ಪರಿಪಾಲನೆ ಮಾಡುವುದು ಅಗತ್ಯ ಎಂದರು.

ಅಂಬೇಡ್ಕರ್ ವಿಚಾರ ಧಾರೆಗಳನ್ನು ಮಾತನಾಡುವುದಕ್ಕೆ ಮಾತ್ರ ಸೀಮಿತವಾಗದೇ ಅವುಗಳ ಪರಿಪಾಲನೆ ಆಗಬೇಕು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು . ಸಮಾಜದಲ್ಲಿನ ವ್ಯಕ್ತಿಗಳು ಜಾತಿ ಮತ ಪಂಥಗಳಿಗಾಗಿ ಹೋರಾಡದೇ , ಉತ್ತಮ ನೀತಿವಂತರಾಗಿ ಸಾಧನೆ ಮಾಡಬೇಕು, ರಾಜಕೀಯ ಸೇರಿದಂತೆ ಯಾವುದೆ ಅಧಿಕಾರವನ್ನು ಪಡೆಯಲು ತಮ್ಮತನವನ್ನು ಕಳೆದುಕೊಳ್ಳಬಾರದು, ನಮ್ಮತನ ಕಳೆದುಕೊಂಡು ಪಡೆಯುವ ಅಧಿಕಾರದಿಂದ ನೆಮ್ಮದಿ ಸಿಗುವುದಿಲ್ಲ , ಉತ್ತಮ ವ್ಯಕ್ತಿತ್ವದಿಂದ ಸಾಧನೆಗಳನ್ನು ಮಾಡಬೇಕು, ಅಂಬೇಡ್ಕರ್ ಅವರು ತಮ್ಮ ವಿದ್ಯೆ , ಪ್ರತಿಭೆ ಮತ್ತು ಜ್ಞಾನಾರ್ಜನೆಯ ಮೂಲಕ ಸಾಧನೆಗಳನ್ನು ಮಾಡಿದ್ದು, ಇದು ಎಲ್ಲರಿಗೂ ಪ್ರೇರಣೆಯಾಗಬೇಕು ಎಂದರು.

ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಪಂಚಕ್ಷೇತ್ರಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಅಭಿವೃದ್ದಿ ಪಡಿಸಿದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಸಹ ಅಂಬೇಡ್ಕರ್ ಅವರು ರಾಜ್ಯದ ಭೇಟಿ ನೀಡಿದ ವಿವಿಧ ಸ್ಥಳಗಳನ್ನು ಅಭಿವೃದ್ಧಿ ಮಾಡುತ್ತಿದ್ದು, ಅವರ ನೆನಪುಗಳನ್ನು ಮುಂದಿನ ಪೀಳಿಗೆ ಸ್ಮರಿಸುವಂತೆ ಮಾಡುತ್ತಿದೆ ಎಂದರು.

ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ,ಅಂಬೇಡ್ಕರ್ ಅವರು ಯುವ ಸಮುದಾಯಕ್ಕೆ ಪ್ರೇರಣೆಯಾಗಬೇಕು, ಅವರ ಜೀವನ ಚೆರಿತ್ರೆ ಮತ್ತು ವಿಚಾರ ಧಾರೆಗಳನ್ನು ಯುವ ಜನತೆ ಓದಬೇಕು, ಅವರು ಪಡೆದಷ್ಟು ಪದವಿಗಳನ್ನು ಇದುವರೆಗೆ ಯಾರೂ ಪಡೆಯಲು ಸಾಧ್ಯವಾಗಿಲ್ಲ, ಪುಸ್ತಕ ಪ್ರೇಮಿಯಾಗಿದ್ದ ಅವರು ಅಪಾರ ಪ್ರತಿಭೆ ಮತ್ತು ಜ್ಞಾನ ಪಡೆದಿದ್ದರು, ಪರಿಶ್ರಮ ಮತ್ತು ಓದಿನಿಂದ ಮಹಾನ್ ಸಾಧನೆ ಮಾಡಬಹುದು ಎನ್ನುವುದಕ್ಕೆ ಅವರೇ ಸಾಕ್ಷಿ. ದೇಶದಲ್ಲಿನ ಅಸ್ಪೃಶ್ಯರು ಮತ್ತು ಹಿಂದುಳಿದವರಿಗೆ ಸಂವಿಧಾನದ ಮೂಲಕ ನ್ಯಾಯ ಒದಗಿಸಿದ್ದರು ಎಂದರು.

ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಕುರಿತು ಉಪನ್ಯಾಸ ನೀಡಿದ,ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಗಣನಾಥ ಎಕ್ಕಾರು ಮಾತನಾಡಿ, ಭಾರತದ ಸಂಸೃತಿಯನ್ನು ಅಂರ್ತಗತ ಮಾಡಿಕೊಂಡಿದ್ದ ಅಂಬೇಡ್ಕರ್ ಅವರು, ಅದನ್ನು ಸಂವಿಧಾನ ರಚನೆ ಸಂದರ್ಭದಲ್ಲಿ ಬಳಸಿಕೊಂಡಿದ್ದರು. ಅವರ ರಚನೆಯ ಸಂವಿದಾನ ಇದುವರೆಗೂ ಭಾರತದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಿದೆ. ಅಪಾರ ಜ್ಞಾನ ,ಪಾಂಡಿತ್ಯ ಗಳಿಸಿದ್ದರೂ ಅಸ್ಪೃಶ್ಯತೆಯ ನೋವು ಅನುಭವಿಸಿದ್ದರು. ಇಡೀ ದೇಶದ ಸಮಸ್ಯೆ ಅರಿತಿದ್ದ ಅವರು ದಲಿತ ಮತ್ತು ಬಡ ಜನರ ಶ್ರೇಯೋಭಿವೃಧ್ದಿಗಾಗಿ ಜಾರಿಗೆ ತಂದ ಮೀಸಲಾತಿಯಿಂದ ಅಸಮಾನತೆಯಿಂದ ಬಳಲುತ್ತಿದ್ದ ಲಕ್ಷಾಂತರ ಮಂದಿ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ ಎಂದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ವೀಣಾ,ನಗರಸಭೆ ಆಯುಕ್ತ ಡಾ.ಉದಯ ಶೆಟ್ಟಿ ಹಾಗೂ ಸಮುದಾಯದ ಮುಖಂಡರುಗಳು ಹಾಜರಿದ್ದರು.

ದ್ವಿತೀಯ ಪಿಯುಸಿ ಯಲ್ಲಿ ಶೇ.100 ಅಂಕ ಗಳಿಸಿದ ಕು.ಕೀರ್ತಿ ಹಾಗೂ ಎಸ್.ಎಸ್.ಎಲ್.ಸಿಯಲ್ಲಿ 98.72% ಅಂಕ ಪಡೆದ ಕು.ಅನುಪಮಾ ಅವರನ್ನು ಸನ್ಮಾನಿಸಲಾಯಿತು. ಪ.ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ, ಅಂತರ್ಜಾತಿ ವಿವಾಹವಾದವರಿಗೆ ಪ್ರೋತ್ಸಾಹ ಧನ, ಆಟೋರಿಕ್ಷಾ ಮಂಜೂರಾತಿ ಮತ್ತು ಅಂಬೇಡ್ಕರ್ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಪ್ರಬಂಧ ಸ್ಪರ್ದೇ ಮತ್ತು ಪೋಸÀ್ಟರ್ ರಚನೆ ಸ್ಪರ್ದೇಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಅನಿತಾ ಮಡ್ಲೂರ ಸ್ವಾಗತಿಸಿದರು, ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಮೇಶ್ ವಂದಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!