ಆರ್ ಟಿ- ಪಿ ಸಿ ಆರ್ ಪರೀಕ್ಷೆ ಕಡ್ಡಾಯಬೇಡ: ಒತ್ತಡ ತಗ್ಗಿಸಿ
ಕೊರೊನಾ ಭಯ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಕಾರಣಕ್ಕೆ ಪದವಿ ಅಂತಿಮ ವರ್ಷದ ತರಗತಿಗಳನ್ನು ಆರಂಭಿಸಿದ ಸರ್ಕಾರದ ನಿರ್ಧಾರ ಸ್ವಾಗತಾರ್ಹ.
ಕಾಲೇಜಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಕೋವಿಡ್ ತಪಾಸಣಾ ವರದಿ ಮತ್ತು ಪಾಲಕರ ಒಪ್ಪಿಗೆ ಪತ್ರ ಕಡ್ಡಾಯ ಮಾಡಿರುವ ನಿಯಮಾವಳಿ ಒಪ್ಪಬಹುದಾದರೂ, ಸರ್ಕಾರ ಕೋವಿಡ್ ತಪಾಸಣೆಯಲ್ಲಿ ಆರ್ ಟಿಪಿಸಿಆರ್ ಪರೀಕ್ಷೆ ಕಡ್ಡಾಯ ಮಾಡಿರುವುದು ಸರಿಯಲ್ಲ. ಪ್ರಸ್ತುತ ಸಂದರ್ಭದಲ್ಲಿ ಇದು ಸರ್ಕಾರಕ್ಕೆ ಆರ್ಥಿಕ ಹೊರೆಯಾಗುವ ವಿಚಾರ. ಇದಲ್ಲದೆ ಜಿಲ್ಲಾಮಟ್ಟದಲ್ಲಿ ದಿನವೊಂದಕ್ಕೆ ಸಾವಿರಾರು ಕೋವಿಡ್ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಲು ಸೂಕ್ತ ವ್ಯವಸ್ಥೆ ಇಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ರೀತಿ ತಪಾಸಣಾ ಪ್ರಯೋಗಾಲಯ ಕಾರವಾರದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಮಾತ್ರ ಇದೆ. ಅಲ್ಲಿ ಕೋವಿಡ್ ಆರಂಭ ಕಾಲದಿಂದಲೂ ಒತ್ತಡದ ನಡುವೆಯೂ ಗಂಟಲುದ್ರವದ ಮಾದರಿ ಪರೀಕ್ಷಿಸಿ ಕಾಲಕಾಲಕ್ಕೆ ವರದಿ ನೀಡುವ ಕೆಲಸವನ್ನು ಸಿಬ್ಬಂದಿ ಮಾಡಿದ್ದಾರೆ. ಎಂತಹ ಒತ್ತಡದ ಸ್ಥಿತಿ ಇದ್ದರೂ ಪರಿಸ್ಥಿತಿ ನಿಭಾಯಿಸುವ ಸಂಸ್ಥೆಯ ನಿರ್ದೇಶಕ ಡಾ.ಗಜಾನನ ನಾಯಕ ಮತ್ತು ತಂಡ ಈಗಲೂ ಸಾವಿರಾರು ಮಾದರಿಗಳನ್ನು ಪ್ರತಿದಿನ ಪರೀಕ್ಷಿಸಲು ಹರಸಾಹಸ ಪಡುತ್ತಿದೆ.
ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಜಿಲ್ಲಾಧಿಕಾರಿಡಾ.ಹರೀಶ್ಕುಮಾರ್ ಕೆ. ಈವರೆಗೂ ಒಳ್ಳೆಯ ಕೆಲಸ ಮಾಡಿದ್ದಾರೆ. ಈಗ ಪದವಿ ಕಾಲೇಜು ಆರಂಭಿಸಿದ ಬೆನ್ನಲ್ಲಿಯೇ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಲು ಇರುವ ಒತ್ತಡದ ಸ್ಥಿತಿ ಪರಿಹರಿಸಲು ಅವರು ಮುಂದಾಗಬೇಕು. ಮೆಡಿಕಲ್ ಕಾಲೇಜಿನ ಕೋವಿಡ್ ವಾರ್ಡ್ ನಲ್ಲಿ ಸದ್ಯ ಎರಡು ಆರ್ ಟಿಪಿಸಿಆರ್ ಯಂತ್ರ ಕಾರ್ಯನಿರ್ವಹಣೆ ಮಾಡುತ್ತಿದ್ದು, ಹೆಚ್ಚುವರಿಯಾಗಿ ನೀಡಿರುವ ಇನ್ನೊಂದು ಯಂತ್ರವನ್ನು ಆದಷ್ಟು ಬೇಗ ಕಾರ್ಯಾರಂಭಿಸಲು ಕ್ರಮವಹಿಸಬೇಕು.
ವಿದ್ಯಾರ್ಥಿಗಳ ಕೊರೊನಾ ತಪಾಸಣೆ ಜೊತೆಗೆ ಸಾರ್ವಜನಿಕರು, ವಿದೇಶಕ್ಕೆ ತೆರಳುವವರ ಕೊರೊನಾ ಪರೀಕ್ಷೆಯನ್ನು ಪ್ರತಿದಿನ ನಡೆಸಬೇಕಾಗಿದೆ. ಇದು ಪ್ರಯೋಗಾಲಯದ ಮೇಲೆ ವಿಪರೀತ ಒತ್ತಡ ತರುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ಕೊರೊನಾ ನಿಯಂತ್ರಣದಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿರುವ ಬಗ್ಗೆ ಆರೋಗ್ಯ ಸಚಿವರಿಂದ ಮೆಚ್ಚುಗೆಯೂ ವ್ಯಕ್ತವಾಗಿದ್ದನ್ನು ಇಲ್ಲಿ ಶ್ಲಾಘಿಸಬೇಕು.
ವಿದ್ಯಾರ್ಥಿಗಳಿಗೆ ಆರ್ ಟಿಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸುವ ಬದಲು ರಾಪಿಡ್ ಟೆಸ್ಟ್ ನಡೆಸಬಹುದು. ರಾಪಿಡ್ ಪರೀಕ್ಷೆ ಆಯಾ ತಾಲೂಕು ಗಳಲ್ಲಿಯೇ ಮಾಡಬಹುದು ಇಲ್ಲವೇ ಹೆಚ್ಚುವರಿ ಪ್ರಯೋಗಾಲಯ ಸ್ಥಾಪನೆಗೆ ಸರ್ಕಾರದ ಗಮನಳೆಯಬೇಕು.
ಗಮನಿಸಬೇಕಾದ ಪ್ರಮುಖ ಸಂಗತಿ ಎಂದರೆ ಒಮ್ಮೆ ಓರ್ವ ವಿದ್ಯಾರ್ಥಿಯ ಕೋವಿಡ್ ಪರೀಕ್ಷೆಯನ್ನು ಆರ್ ಟಿಪಿಸಿಆರ್ ಮುಖಾಂತರ ನಡೆಸಲು ಸುಮಾರು ಎರಡು ಸಾವಿರಕ್ಕೂ ಅಧಿಕ ವೆಚ್ಚವಾಗಿತ್ತದೆ. ಒಮ್ಮೆ ಪರೀಕ್ಷೆ ಮಾಡಿದ ಬಳಿಕ ಆತನಿಗೆ ಕೋವಿಡ್ ಬರಲ್ಲವೆಂದಿಲ್ಲ. ಕೇವಲ ಕಾಲೇಜು ಆರಂಭದ ವೇಳೆ ವಿದ್ಯಾರ್ಥಿಗಳ ಕೋವಿಡ್ ತಪಾಸಣೆ ನಡೆಸಿ ಬಿಡುವ ಬದಲು ಅವರ ಸುರಕ್ಷತೆಗೆ ಹೆಚ್ಚು ಮುತುವರ್ಜಿ ವಹಿಸಬೇಕು.
Also read:
- Daily Panchangam
- Sri Dharmasthala Mela Yakshagana show today
- Mandarthi Mela Yakshagana show today
- Kateel Mela Yakshagana details
- Udupi Sri Krishna Alankara