ಉಡುಪಿಯಲ್ಲಿ ರಾಜ್ಯದ ಮೊದಲ ಸಮಗ್ರ ಕರ್ನಾಟಕ ಯಕ್ಷಗಾನ ಸಮ್ಮೇಳನ:ಸುನೀಲ್ ಕುಮಾರ್


ಉಡುಪಿ, ಜ 09, 2023: ರಾಜ್ಯದ ಮೊದಲ ಸಮಗ್ರ ಕರ್ನಾಟಕ ಯಕ್ಷಗಾನ ಸಮ್ಮೇಳನವು ಫೆಬ್ರವರಿ 11 ಮತ್ತು 12 ರಂದು ಉಡುಪಿಯ ಎಂ ಜಿ ಎಂ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹಾಗೂ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದ ಸಲಹಾ ಸಮಿತಿಯ ಅಧ್ಯಕ್ಷ ವಿ.ಸುನಿಲ್ ಕುಮಾರ್ ಹೇಳಿದರು.
ಅವರು ಇಂದು ನಗರದ ಎಂ ಜಿ ಎಂ ಕಾಲೇಜಿನ ಆವರಣ, ರವೀಂದ್ರ ಮಂಟಪದ ಹಿಂಭಾಗದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ತಾತ್ಕಾಲಿಕ ಕಚೇರಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಯಕ್ಷಗಾನಕ್ಕೆ ತನ್ನದೇ ಆದ ಹಿರಿಮೆ ಗರಿಮೆ ಇದ್ದು, ತುಳುನಾಡಿನಲ್ಲಿ ಇದಕ್ಕೆ ಇನ್ನೂ ಹೆಚ್ಚಿನ ಮಹತ್ವ ಇದೆ. ಯಕ್ಷಗಾನದಲ್ಲಿ ಪ್ರಸ್ತುತ ಇರುವ ಮತ್ತು ಮುಂದಿನ ದಿನದಲ್ಲಿ ಎದುರಾಗುವ ಹೊಸ ರೀತಿಯ ಸವಾಲುಗಳನ್ನು ಎದುರಿಸುವ ಬಗ್ಗೆ, ಹೊಸ ಪೀಳಿಗೆಗೆ ಯಕ್ಷಗಾನದ ಬಗ್ಗೆ ತಿಳಿಸಲು ಸೇರಿದಂತೆ ಯಕ್ಷಗಾನ ಬೆಳವಣಿಗೆ ಕುರಿತಂತೆ ಸಮ್ಮೇಳನದಲ್ಲಿ ಸಮಗ್ರ ಚರ್ಚೆ ನಡೆಯಲಿದೆ ಎಂದರು.
ಯಕ್ಷಗಾನ ಕಲಾವಿದರು ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಬಳುವಳಿಯನ್ನು ನೀಡಿದ್ದಾರೆ. ಯಕ್ಷಗಾನ ಪ್ರಸಂಗದಲ್ಲಿ ಯಾವುದೇ ಒಂದು ಆಂಗ್ಲ ಭಾಷೆಯನ್ನು ಬಳಕೆ ಮಾಡದೇ ನಡೆಸುತ್ತಾ ಬಂದಿರುವುದು ಒಂದು ಮಹತ್ವವಾದ ಕೆಲಸ. ಇದು ಅವರ ಪ್ರಬುದ್ಧತೆ ಮತ್ತು ಹಿರಿಮೆಯನ್ನು ತೋರುತ್ತದೆ ಎಂದ ಅವರು, ಯಕ್ಷಗಾನ ಸಮ್ಮೇಳನವು ಎಲ್ಲಾ ಸಮ್ಮೇಳನಗಳಿಗೆ ಮಾದರಿಯಾಗುವ ರೀತಿಯಲ್ಲಿ ನಡೆಯಬೇಕು ಎಂದರು.
2 ದಿನಗಳ ಕಾಲ ನಡೆಯುವ ಈ ಸಮ್ಮೇಳನಕ್ಕಾಗಿ ರಾಜ್ಯ ಸರ್ಕಾರದಿಂದ 2 ಕೋಟಿ ರೂ. ಗಳನ್ನು ಬಿಡುಗಡೆಗೊಳಿಸುವುದಾಗಿ ಸಚಿವರು ಹೇಳಿದರು.
ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿದ ಸಚಿವರು, ಅಧ್ಯಕ್ಷರಾಗಿ ಡಾ.ಪ್ರಭಾಕರ ಜೋಷಿ ಅವರನ್ನು ಸಚಿವರು ಘೋಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್ ಮಾತನಾಡಿ, ರಾಜ್ಯದಲ್ಲೇ ಪ್ರಥಮ ಬಾರಿಗೆ ನಡೆಯುತ್ತಿರುವ ಸಮಗ್ರ ಕರ್ನಾಟಕ ಯಕ್ಷಗಾನ ಸಮ್ಮೇಳನದ ಅಭೂತಪೂರ್ವ ಯಶಸ್ಸಿಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಜಿಲ್ಲೆಯ ಹಿರಿಯ ಯಕ್ಷಗಾನ ಕಲಾವಿದರು, ಯಕ್ಷಗಾನ ಆಸಕ್ತರು ಹಾಗೂ ಸಾರ್ವಜನಿಕರು ಮತ್ತು ಸಂಘ-ಸAಸ್ಥೆಗಳ ಸಹಕಾರ ಪಡೆಯಲಾಗುವುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ, ಯಕ್ಷಗಾನ ಸಮ್ಮೇಳನದ ಕಾರ್ಯಾಧ್ಯಕ್ಷ ಡಾ. ಜಿ.ಎಲ್.ಹೆಗಡೆ, ಯಕ್ಷಗಾನವು ಕನ್ನಡ ಭಾಷೆಯ ಸಮೃದ್ಧ ಬೆಳವಣಿಗೆಗೆ ಅತೀ ಹೆಚ್ಚಿನ ಕೊಡುಗೆ ನೀಡಿದೆ. ಕನ್ನಡದ ಕಾವ್ಯಗಳನ್ನು ಕಟ್ಟಿ ನಿಲ್ಲಿಸಿದೆ. ಇದುವರೆಗೆ 52 ಮಂದಿ ಯಕ್ಷಗಾನದ ವಿವಿಧ ವಿಷಯಗಳಿಗೆ ಸಂಬAಧಿಸಿದAತೆ ಪಿ.ಹೆಚ್.ಡಿ ಪಡೆದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ, ಸಾಲಿಗ್ರಾಮ ಮತ್ತು ಇತರೆ ಮೇಳಗಳ ಮುಖ್ಯಸ್ಥ ಪಿ.ಕಿಶನ್ ಹೆಗ್ಡೆ, ಮಂದಾರ್ತಿ ಯಕ್ಷಗಾನ ಮೇಳದ ಅಧ್ಯಕ್ಷ ಧನಂಜಯ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಸ್ವಾಗತಿಸಿದರು, ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟಾçರ್ ಶಿವರುದ್ರಪ್ಪ ವಂದಿಸಿದರು. ಮುರಳಿ ಕಡೆಕಾರ್ ನಿರೂಪಿಸಿದರು.