ಪ್ರಮಾಣೀಕೃತ ವಿಪತ್ತು ನಿರ್ವಹಣೆಯ ವ್ಯವಸ್ಥೆ ಅತ್ಯಗತ್ಯ : ಮುಖ್ಯಮಂತ್ರಿ ಬೊಮ್ಮಾಯಿ

 ಪ್ರಮಾಣೀಕೃತ ವಿಪತ್ತು ನಿರ್ವಹಣೆಯ ವ್ಯವಸ್ಥೆ ಅತ್ಯಗತ್ಯ : ಮುಖ್ಯಮಂತ್ರಿ ಬೊಮ್ಮಾಯಿ
Share this post

ಬೆಂಗಳೂರು, ಜುಲೈ 22, 2022: ಪ್ರಕೃತಿ ವಿಕೋಪ ಸಂದರ್ಭದಲ್ಲಿ ಪ್ರಮಾಣೀಕೃತ ವಿಪತ್ತು ನಿರ್ವಹಣೆಯ ವ್ಯವಸ್ಥೆ ಅತ್ಯಗತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕೇಂದ್ರ ಗೃಹ ಮಂತ್ರಾಲಯ ಹಾಗೂ ಕೆ.ಎಸ್.ಡಿ.ಎಂ.ಎ ವತಿಯಿಂದ ಆಯೋಜಿಸಲಾಗಿದ್ದ ಆಪ್ದಾ ಮಿತ್ರ ಯೋಜನೆಯ ಉನ್ನತೀಕರಣಕ್ಕಾಗಿ ಮೊಬೈಲ್ ಆಪ್ ಹಾಗೂ ಎಂ.ಐ.ಎಸ್ ತರಬೇತಿಗಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಜ್ಯ ಹಲವು ಬಾರಿ ಪ್ರಕೃತಿ ವಿಕೋಪದ ಪರಿಸ್ಥಿತಿಯನ್ನು ಎದುರಿಸಿದೆ. ಹಿಂದಿನ ವಿಪತ್ತು ನಿರ್ವಹಣೆಯಲ್ಲಾದ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳುವ ಜೊತೆಗೆ ಪ್ರಮಾಣೀಕೃತ ವಿಪತ್ತು ನಿರ್ವಹಣೆಯ ವ್ಯವಸ್ಥೆಯ ಅಗತ್ಯವಿದೆ. ರಾಜ್ಯದಲ್ಲಿ ಪ್ರವಾಹಕ್ಕೆ ತುತ್ತಾಗುವ ಪ್ರದೇಶಗಳಲ್ಲಿ ಸಂಭವಿಸಬಹುದಾದ ವಿಪತ್ತುಗಳ ಬಗ್ಗೆ ಮುಂಚಿತವಾಗಿಯೇ ತಿಳಿದುಕೊಂಡು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪ್ರತಿಬಾರಿಯೂ ಸೂಚನೆಗಾಗಿ ಕಾಯುವಂತಿರಬಾರದು. ತಂತ್ರಜ್ಞಾನದ ಬಳಕೆ ವಿಪತ್ತು ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಜನರ ಭಾಗವಹಿಸುವಿಕೆಯಿಂದ ವಿಪತ್ತು ನಿರ್ವಹಣೆ ಸುಲಭ:

ಪ್ರಕೃತಿ ವಿಕೋಪಗಳನ್ನು ತಡೆಯಲು ಸಾಧ್ಯವಿಲ್ಲ. ಆದರೆ ವಿಪತ್ತುಗಳು ಸಂಭವಿಸುವ ಮುನ್ನ ಹಾಗೂ ನಂತರದ ನಿರ್ವಹಣಾ ಕ್ರಮಗಳು ಪ್ರಾಮುಖ್ಯತೆಯನ್ನು ಪಡೆಯುತ್ತವೆ. ಈ ವಿಕೋಪಗಳಿಂದ ನಾವು ಬಹಳಷ್ಟು ಕಲಿತಿದ್ದೇವೆ. ದೇಶದ ಕರಾವಳಿ ಭಾಗಗಳಲ್ಲಿ, ಉತ್ತರ ಹಾಗೂ ದಕ್ಷಿಣ ಭಾಗಗಳಲ್ಲಿ ಪ್ರಕೃತಿ ವಿಕೋಪಗಳು ಉಂಟಾಗಿದೆ. ಏಕರೂಪದ ವಿಪತ್ತು ನಿರ್ವಹಣೆ ತಂಡಗಳಿರಬೇಕು ಎಂಬುದು ಪ್ರಧಾನಿ ಮೋದಿಯವರ ತಿಳಿಸಿದ್ದಾರೆ. ವಿಪತ್ತುಗಳಿಗೆ ಸ್ಪಂದಿಸುವುದು ಮಾತ್ರವಲ್ಲ. ಅದರ ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕಾಗುತ್ತದೆ. ವಿಪತ್ತು ನಿರ್ವಹಣೆಯನ್ನು ಅತ್ಯಂತ ಮಹತ್ವ ನೀಡಿ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಈ ಚಿಂತನೆಯಿಂದ ಆಪ್ದಾಮಿತ್ರ ಆಪ್‍ನ್ನು ಮಾಡಲಾಗಿದೆ. ಜನರ ಭಾಗವಹಿಸುವಿಕೆಯೇ ಪ್ರಜಾಪ್ರಭುತ್ವವಾಗಿದೆ. ದೇಶದ ಜನರು ಆರ್ಥಿಕ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಜೊತೆಗೆ ವಿಪತ್ತು ನಿರ್ವಹಣೆಯಲ್ಲಿಯೂ ಕೈಜೋಡಿಸಬೇಕು. ಸಮುದಾಯಗಳಿಗೆ ಸೂಕ್ತ ತರಬೇತಿ, ಮಾಹಿತಿ ಹಾಗೂ ಪರಿಕರಗಳನ್ನು ನೀಡಿ ಇಂತಹ ರಾಷ್ಟ್ರೀಯ ಮುಖ್ಯವಾಹಿನಿಗೆ ಸೇರಿಸಿಕೊಳ್ಳಬೇಕು. ಸುಮಾರು ಒಂದು ಲಕ್ಷ ಸ್ವಯಂಸೇವಕರಿಗೆ ತರಬೇತಿ ನೀಡುವುದು ಉತ್ತಮ ಆರಂಭವಾಗಿದೆ. ಇಂತಹ ಸ್ವಯಂಸೇವಕರ ತಂಡಗಳಿಂದ ವಿಪತ್ತು ನಿರ್ವಹಣಾ ಕಾರ್ಯವು ಸುಲಭಸಾಧ್ಯವಾಗಲಿದೆ ಎಂದರು.

ವಿಪತ್ತು ನಿರ್ವಹಣೆಯಲ್ಲಿ ಸಾಮಾನ್ಯ ಕೋಡ್‍ಗಳ ಬಳಕೆ :

ಹೆಚ್ಚಿನ ಎಸ್‍ಡಿಆರಎಫ್ ತಂಡಗಳನ್ನು ರಚಿಸಲು ಸೂಚನೆ ನೀಡಲಾಗಿದೆ. ವಿಪತ್ತು ನಿರ್ವಹಣೆಯಲ್ಲಿ ಸಮುದಾಯಗಳನ್ನು ಬಳಸಿಕೊಳ್ಳುವ ಕರ್ನಾಟಕ ವಿನೂತನ ಕ್ರಮವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದ್ದಾರೆ. ವಿಪತ್ತು ಸಂಭವಿಸಿದ ಎಲ್ಲ ಪ್ರದೇಶಗಳಲ್ಲಿ ಸಾಮಾನ್ಯ ಕೋಡ್‍ಗಳ ಬಳಕೆ ಮಾಡಿಕೊಂಡು ಕ್ಷಿಪ್ರ ಹಾಗೂ ಪರಿಣಾಮಕಾರಿ ಕಾರ್ಯಾಚರಣೆ ಮಾಡಬೇಕಿದೆ. ಜನರು ತೀವ್ರತರವಾದ ಸಮಸ್ಯೆಯಲ್ಲಿದ್ದಾಗ ಕಾರ್ಯನಿರ್ವಹಿಸುವ ಸರ್ಕಾರ ಸ್ಪಂದನಾಶೀಲ ಹಾಗೂ ಜೀವಂತವಾಗಿರುತ್ತದೆ. ಆಪ್ದಾ ಮಿತ್ರ ಮೊಬೈಲ್ ಆಪ್ ನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತಾಗಬೇಕು. ಎಂಐಎಸ್(ನಿರ್ವಹಣಾ ಮಾಹಿತಿ ವ್ಯವಸ್ಥೆ) ತರಬೇತಿ ಪಡೆದಿರುವ ಸ್ವಯಂಸೇವಕರ ಕಾರ್ಯನಿರ್ವಹಿಸಿರುವುದನ್ನು ವರದಿ ಮಾಡುವ ವ್ಯವಸ್ಥೆಯನ್ನೂ ಸೃಜಿಸಬೇಕು. ಆಗ ಮಾತ್ರ ವಿಪತ್ತು ನಿರ್ವಹಣೆ ಸಮರ್ಪಕವಾಗಿ ಆಗುವ ಜೊತೆಗೆ ರಕ್ಷಣೆ, ಪರಿಹಾರ ಹಾಗೂ ಪುರ್ನವಸತಿ ಕಾರ್ಯಗಳು ಸಫಲವಾಗುತ್ತವೆ ಎಂದರು.

ವಿಕೋಪಗಳನ್ನು ತಡೆಗಟ್ಟಲು ಸಮುದಾಯಗಳ ಪಾಲ್ಗೊಳ್ಳುವಿಕೆ ಅಗತ್ಯ:

ಪ್ರಕೃತಿ ವಿಕೋಪವನ್ನು ಸಮುದಾಯಗಳ ಭಾಗವಹಿಸುವಿಕೆ, ಸಹಾಯದಿಂದ ನಿಯಂತ್ರಿಸಬಹುದು ಎನುವುದನ್ನು ನಾವು ಕಂಡುಕೊಂಡಿದ್ದೇವೆ. ಸಮುದಾಯಗಳೇ ಅಲ್ಲಿ ವಾಸಿಸುವುದರಿಂದ ಹಾಗೂ ಅವರೇ ಪ್ರಥಮ ಸಾಕ್ಷಿಗಳಾಗಿರುವುದರಿಂದ ಸಮುದಾಯಗಳಿಂದ ಸ್ಪಂದನೆ ಹಲವಾರು ಜೀವಗಳನ್ನು ಹಾಗೂ ಆಸ್ತಿಯನ್ನು ಉಳಿಸುತ್ತದೆ. ಕಳೆದ 70 ವರ್ಷಗಳಿಂದ ಯೋಚಿಸಿರದಿದ್ದ ಸಮುದಾಯದ ಭಾಗವಹಿಸುವಿಕೆಯನ್ನು ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಮುದಾಯಗಳ ಮೂಲಕ ವಿಕೋಪಗಳನ್ನು ಎದುರಿಸಬಹುದೆಂದು ನಿರೂಪಿಸಿದ್ದಾರೆ. ಆಪ್ದಾ ಮಿತ್ರಾ ಅದರ ಪ್ರತಿಫಲವಾಗಿದೆ. ಕರ್ನಾಟಕ ಐಟಿಬಿಟಿಯಲ್ಲಿ ಮುಂಚೂಣಿಯಲ್ಲಿದ್ದು, ಆಪತ್ ಮಿತ್ರಾ ಎಂ.ಐ.ಎಸ್ ನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ಹೊತ್ತಿದೆ. ಕೇಂದ್ರ ಸರ್ಕಾರ ಸೇರಿದಂತೆ ಎಲ್ಲಾ ರಾಜ್ಯಗಳ ಮಧ್ಯೆ ಮಾಹಿತಿ ವಿನಿಮಯಕ್ಕೆ ಇದರಿಂದ ಅನುಕೂಲವಾಗಲಿದೆ ಕಂದಾಯ ಸಚಿವ ಆರ್. ಅಶೋಕ್ ಅವರ ನೇತೃತ್ವದಲ್ಲಿ ರಾಜ್ಯದ ವಿಕೋಪ ನಿರ್ವಹಣಾ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದು ನಮ್ಮ ಹೆಮ್ಮೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಮಾನವನ ಜೀವನಶೈಲಿಯಿಂದ ಪರಿಸರ ಅಸಮತೋಲನ:
ಭೂಮಿಯನ್ನು ಉಳಿಸದಿದ್ದರೆ, ಮಾನವಕುಲದ ಉಳಿಯುವಿಕೆಯೇ ಅಸಾಧ್ಯ. ಪರಿಸರ ಅಸಮತೋಲನಗಳು ಕೇವಲ ಹವಾಮಾನ ಬದಲಾವಣೆಯಿಂದ ವಿಕೋಪಗಳು ಆಗುತ್ತಿಲ್ಲ. ಅದು ನಮ್ಮ ಜೀವನಶೈಲಿಯಿಂದಲೂ ಹಾಳಾಗುತ್ತಿದೆ. ಮಾನವ ನಿರ್ಮಿತ ವಿಕೋಪಗಳನ್ನು ತಡೆಗಟ್ಟಲು ನಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ವಿಕೋಪಗಳು ಘಟಿಸುವುದನ್ನು ಸನ್ನದ್ಧತೆಯಿಂದ ತಡೆಯಬಹುದು ಎಂದರು.

ವಿಕೋಪ ನಿರ್ವಹಣೆಗೆ ಸನ್ನದ್ಧತೆ :

ನಮ್ಮ ಬಳಿ, ಪರಿಕರಗಳು, ಸರ್ಕಾರ, ಅನುದಾನ, ಸಿಬ್ಬಂದಿ ಎಲ್ಲವೂ ಇವೆ. ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ. ವಿಕೋಪಗಳು ಬೆಂಕಿ, ಪ್ರವಾಹ ಮುಂತಾದ ವಿಭಿನ್ನ ಬಗೆಯಲ್ಲಿ ಬರಬಹುದು. ಆದರೆ ನಮ್ಮ ತಂಡ ಯಾವುದೇ ಸಮಯದಲ್ಲಿ, ಯಾವುದಕ್ಕಾದರೂ ಸಿದ್ಧವಾಗಿರಬೇಕು. ಅದನ್ನೇ ವಿಕೋಪ ನಿರ್ವಹಣೆ ಎನ್ನುವುದು. ವಿಕೋಪಗಳನ್ನು ಯೋಜಿಸುವುದಾಗಲಿ, ನಿರ್ಬಂಧಿಸುವುದಾಗಲಿ ಸಾಧ್ಯವಿಲ್ಲ. ಆದರೆ ನಿರ್ವಣೆಯನ್ನು ಯೋಜಿಸಬಹುದು ಎಂದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!