ಪ್ರಕೃತಿ ಚಿಕಿತ್ಸೆ ಜಾಗೃತಿ ಮೂಡಿಸುವಲ್ಲಿ ವೀರೇಂದ್ರ ಹೆಗ್ಗಡೆಯವರ ಪಾತ್ರ ಅನನ್ಯ: ಡಾ ಮೋಹನ ಆಳ್ವ

ಎಸ್ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಶಬರಿ, ವಾಲ್ಮೀಕಿ, ಗುಹಾ, ಏಕಲವ್ಯ ಕುಟೀರಗಳ ಉದ್ಘಾಟನೆ

ಬೆಳ್ತಂಗಡಿ, ಜನವರಿ 1, 2021: ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವ ಬದಲು ರೋಗ ಬಾರದಂತೆ ನೋಡಿಕೊಳ್ಳುವುದೇ ಪ್ರಕೃತಿ ಚಿಕಿತ್ಸೆಯ ಉದ್ದೇಶ. ಎಸ್ಡಿಎಂನ ಪ್ರಕೃತಿ ಚಿಕಿತ್ಸಾಲಯದಲ್ಲಿ ಪಂಚಭೂತಗಳಿಂದ ಸೃಷ್ಟಿಯಾದ ದೇಹಕ್ಕೆ ಜಲ, ವಾಯು, ಮಣ್ಣು ಹೀಗೆ ಪಂಚಭೂತ ತತ್ವಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕೃತಿ ಚಿಕಿತ್ಸೆಯ ಮಹತ್ವವನ್ನು ನಾಡಿನೆಲ್ಲೆಡೆ ತಿಳಿಸುವ, ಜಾಗೃತಿ ಮೂಡಿಸುವಲ್ಲಿ ಅವರ ಪಾತ್ರ ಅನನ್ಯವಾದುದು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ ಹೇಳಿದರು.

ಅವರು ಧರ್ಮಸ್ಥಳ ನೇತ್ರಾವತಿ ನದಿ ಸಮೀಪವಿರುವ ಎಸ್ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಪ್ರಕೃತಿ ಚಿಕಿತ್ಸಾ ಸಾಧಕರ ವಾಸ್ತವ್ಯಕ್ಕಾಗಿ ನಿರ್ಮಿಸಲಾಗಿರುವ ಶಬರಿ, ವಾಲ್ಮೀಕಿ, ಗುಹಾ, ಏಕಲವ್ಯ ಕುಟೀರಗಳನ್ನು ಉದ್ಘಾಟನೆಗೊಳಿಸಿ ಮಾತನಾಡಿದರು.
ಶ್ರೀ ಹೆಗ್ಗಡೆಯವರು ನೆಟ್ಟ ಪ್ರಕೃತಿ ಚಿಕಿತ್ಸಾ ಕಾಲೇಜು ಮತ್ತು ಆಸ್ಪತ್ರೆ ಎಂಬ ಬೀಜ ಇಂದು ಹೆಮ್ಮರವಾಗಿ ಬೆಳೆದಿದ್ದು, ಇಲ್ಲಿ ಕಲಿತ ಅನೇಕರು ದೇಶ-ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಔಷಧವೇ ಇಲ್ಲದೆ ಹೇಗೆ ಒಬ್ಬ ವ್ಯಕ್ತಿ ಬದುಕಬಹುದು ಎಂಬುದನ್ನು ಪ್ರಕೃತಿ ಚಿಕಿತ್ಸೆಯ ಮೂಲಕ ಅರಿತುಕೊಳ್ಳಬಹುದು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಕೊರೋನ ನಂತರದ ಸಮಯದಲ್ಲಿ ಪೇಟೆಗೆ ವಲಸೆ ಹೋದ ಅನೇಕರು ಹಳ್ಳಿಗಳಿಗೆ ಮರಳಿ, ತಮ್ಮ ಹೊಲ-ಗದ್ದೆಗಳಲ್ಲಿ ದುಡಿಯುತ್ತಾ, ಹೈನುಗಾರಿಕೆ ಇತ್ಯಾದಿಗಳ ಬಗ್ಗೆ ಆಸಕ್ತಿ ವಹಿಸುತ್ತಿದ್ದಾರೆ. ಆಧುನಿಕ ಜೀವನದ ಜೊತೆಗೆ ಜೊತೆ ಜನರು ಪ್ರಕೃತಿ ಚಿಕಿತ್ಸೆ ಹಾಗೂ ಸರಳ ಜೀವನದತ್ತ ಆಸಕ್ತರಾಗುತ್ತಿರುವುದು ಉತ್ತಮ ಬೆಳವಣಿಗೆ. ಈ ಪ್ರಕೃತಿ ಚಿಕಿತ್ಸೆಯಲ್ಲಿ ಸಾಧಕರನ್ನು ಔಷಧಿ ಇಲ್ಲದೆ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ಸೇವೆ ನೀಡಲಾಗುತ್ತದೆ ಎಂದರು.

ಸಮಾರಂಭದಲ್ಲಿ ಮಾಜಿ ಕುಲಪತಿ ಡಾ ಕೆ.ಚಿನ್ನಪ್ಪ ಗೌಡ, ಬ್ಯಾಂಕ್ ಆಫ್ ಬರೋಡದ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಅಜಯ್, ಶ್ರೀಮತಿ ಹೇಮಾವತಿ ವೀ ಹೆಗ್ಗಡೆ, ಡಿ ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್. ಶ್ರೀಮತಿ ಶ್ರದ್ಧಾ ಅಮಿತ್, ಶ್ರೀ ಅಮಿತ್, ಕು. ಮಾನ್ಯ, ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಶಾಂತಿವನ ಟ್ರಸ್ಟ್ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ. ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಶ್ರೀ ಎ.ವಿ. ಶೆಟ್ಟಿ, ಹಾಗೂ ಯೋಗ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ಉಪಸ್ಥಿತರಿದ್ದರು.