ಉತ್ತರ ಕನ್ನಡ: 65ನೇ ಕನ್ನಡ ರಾಜ್ಯೋತ್ಸವ ಆಚರಣೆ
![ಉತ್ತರ ಕನ್ನಡ: 65ನೇ ಕನ್ನಡ ರಾಜ್ಯೋತ್ಸವ ಆಚರಣೆ](https://thecanarapost.com/wp-content/uploads/2020/11/WhatsApp-Image-2020-11-01-at-12.26.54-PM-850x560.jpeg)
![](https://thecanarapost.com/wp-content/uploads/2020/11/WhatsApp-Image-2020-11-01-at-12.26.53-PM.jpeg)
ಕಾರವಾರ ನ 01: 65ನೇ ಕರ್ನಾಟಕ ರಾಜ್ಯೋತ್ಸವವನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಸಹಯೋಗದಲ್ಲಿ ನಗರದ ಜಿಲ್ಲಾ ಸಶಸ್ತ್ರ ಪೊಲೀಸ್ ಪರೇಡ್ ಮೈದಾನದಲ್ಲಿ ಆಚರಿಸಲಾಯಿತು.
ಕಾರ್ಮಿಕ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಿದರು.
![](https://thecanarapost.com/wp-content/uploads/2020/11/WhatsApp-Image-2020-11-01-at-12.26.52-PM.jpeg)
“ಕನ್ನಡ ನಾಡಿನ ಎಲ್ಲಾ ಸಂಸ್ಕೃತಿ ಮತ್ತು ಆಚರಣೆಗಳನ್ನು ಹೊಂದಿರುವ ಏಕೈಕ ಜಿಲ್ಲೆಯೆಂದರೆ ಅದು ಉತ್ತರ ಕನ್ನಡ ಜಿಲ್ಲೆಯಾಗಿದೆ. ಕರಾವಳಿ, ಮಲೆನಾಡು ಹಾಗೂ ಬಯಲು ಸೀಮೆಯನ್ನು ಹೊಂದಿರುವ ನಮ್ಮ ಜಿಲ್ಲೆ ಅಪಾರ ವೈವಿದ್ಯಗಳನ್ನು ಮೇಳೈಸಿಕೊಂಡಿರುವ ಜಿಲ್ಲೆ ಎಂದು ಹೆಮ್ಮೆಯಿಂದ ಹೇಳಬಹುದಾಗಿದೆ. ಇಲ್ಲಿನ ವಿವಿಧ ಜನ ಸಮುದಾಯಗಳ ಸಂಪ್ರದಾಯ, ಜಾನಪದ ಕಲೆ, ಸಾಹಿತ್ಯ ಸಮೃದ್ಧಿಯಾಗಿದೆ. ವಿಶೇಷವಾಗಿ ಸಿದ್ದಿ, ಟಿಬೆಟಿಯನ್, ಗೊಂಡ, ಹಾಲಕ್ಕಿ, ಗೌಳಿ ಹೀಗೆ ವಿವಿಧ ಸಮುದಾಯಗಳ ಜಾನಪದ ಕಲೆಗಳನ್ನು ಪೋಷಿಸಲಾಗಿದೆ. ಈ ಹಿಂದೆ ಏಕೀಕರಣ ಸಂದರ್ಭದಲ್ಲಿ ಜಿಲ್ಲೆ ನೀಡಿದ ಕೊಡುಗೆಯನ್ನು ಮರೆಯಲಾಗದು. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಹಲವಾರು ಸೊಬಗನ್ನು ಹೊಂದಿರುವ ಕರ್ನಾಟಕದ ವೈವಿದ್ಯಮಯ ಜಿಲ್ಲೆ” ಎಂದು ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಾಗರೀಕ ಪೊಲೀಸ್ ತುಕಡಿ, ಕಾರವಾರ ಅರಣ್ಯ ಇಲಾಖೆ ಹಾಗೂ ಚೆಂಡಿಯಾ ಘಟಕದ ಗೃಹ ರಕ್ಷಕದಳದ ತುಕಡಿಗಳು ಮಾತ್ರ ಕವಾಯತನಲ್ಲಿ ಭಾಗವಹಿಸಿದವು. ಕಾರ್ಯಕ್ರಮದಲ್ಲಿ ಚಿತ್ತಾಕುಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶೈಲಾ ಸಾಳುಂಕೆ ನಿರೂಪಿಸಿದರು.
ಈ ಸಂದರ್ಭದಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ, ತಾಲೂಕು ಪಂಚಾಯತ ಅಧ್ಯಕ್ಷೆ ಪ್ರಮೀಳಾ ನಾಯ್ಕ, ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ, ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ, ಕಾರವಾರ ಉಪವಿಭಾಗಾಧಿಕಾರಿ ಎಂ.ಪ್ರಿಯಾಂಗಾ ಸೇರಿದಂತೆ ಕನ್ನಡಪರ ಸಂಘಟನೆಗಳು, ಕನ್ನಡಾಭಿಮಾನಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.