ತಲೆ ತಗ್ಗಿಸುವ ವಿದ್ಯಾರ್ಥಿಗಳಾಗದಿರಿ, ತಲೆ ಎತ್ತಿ ನಡೆವ ವಿದ್ಯಾರ್ಥಿಗಳಾಗಿ: ವಿವೇಕ್ ವಿ. ಪಾಯಸ್

ಉಜಿರೆ, ಸೆ 26, 2022: ಪುಸ್ತಕದಲ್ಲಿ ಬರೆದ ಅಕ್ಷರಗಳನ್ನು ತಿದ್ದಬಹುದು, ಆದರೆ ಜೀವನದಲ್ಲಿ ಬರೆದ ಅಕ್ಷರಗಳನ್ನು ತಿದ್ದುವುದು ಬಹಳ ಕಷ್ಟ. ಸೈನಿಕರಾಗಿ ನಿಮ್ಮನ್ನು ನೀವು ತೊಡಗಿಸಿದರೆ ಅದುವೇ ನೀವು ದೇಶಕ್ಕೆ ಕೊಡುವ ದೊಡ್ಡ ಕೊಡುಗೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ ಪಾಯಸ್ ಹೇಳಿದರು.
ಶ್ರೀ ಧ. ಮಂ. ಕಾಲೇಜಿನ ಎನ್ಎಸ್ಎಸ್ ಘಟಕ, ರಾಷ್ಟಿಯ ಸೇವಾ ಯೋಜನಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ‘ಮಾದಕ ವ್ಯಸನಗಳ ತಡೆಗಟ್ಟುವಿಕೆ ಹಾಗೂ ನಿರ್ವಹಣೆ’ ಎಂಬ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸಾತ್ವಿಕ, ತಾಮಸಿಕ, ಶೂನ್ಯ, ವರ್ಜನೀಯ ಆಹಾರ ಕ್ರಮಗಳನ್ನು ನೆನಪಿಟ್ಟುಕೊಂಡು ಆಹಾರಗಳನ್ನು ಸೇವಿಸಬೇಕು. ದುಶ್ಚಟಗಳು ಸುಲಭವಾಗಿ ನಮ್ಮನ್ನು ಆವರಿಸಿಕೊಳ್ಳುತ್ತವೆ. ಹೆಚ್ಚಿನವರು ಕುತೂಹಲದಿಂದ ದುಶ್ಚಟಗಳಲ್ಲಿ ತೊಡಗುತ್ತಾರೆ. ಆರೋಗ್ಯವಂತನ ದೇಹ ಅರಮನೆ, ಅನಾರೋಗ್ಯವಂತನ ದೇಹ ಸೆರೆಮನೆ. ಅಂತಹ ಸೆರೆಮನೆ ಅಕಾಲಿಕ ಮರಣಕ್ಕೆ ಕಾರಣವಾಗುತ್ತದೆ ಎಂದರು.
ನೀವುಗಳು ತಲೆ ತಗ್ಗಿಸುವಂತಹ ವಿದ್ಯಾರ್ಥಿಗಳಾಗಬೇಡಿ ತಲೆ ಎತ್ತಿ ಪ್ರಪಂಚವನ್ನು ನೋಡುವಂತ ವಿದ್ಯಾರ್ಥಿಗಳಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಪಿ ಎನ್ ಉದಯಚಂದ್ರರವರರು ಮಾತನಾಡಿ ವಿದ್ಯಾರ್ಥಿಗಳು ಈ ವಯಸ್ಸಿನಲ್ಲೇ ತಮಗೂ, ತಮ್ಮ ಭವಿಷ್ಯಕ್ಕೂ ಏನು ಸೂಕ್ತ ಎಂಬುದನ್ನು ಅರಿತು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.
ಎನ್ ಎಸ್ ಎಸ್ ನ ಯೋಜನಾಧಿಕಾರಿ ಡಾ. ಲಕ್ಷ್ಮಿನಾರಾಯಣ ಕೆ. ಎಸ್ ಸ್ವಾಗತಿಸಿ, ದೀಪ ಆರ್. ಪಿ ವಂದಿಸಿದರು. ವಿದ್ಯಾರ್ಥಿನಿ ಅಂಜನಾ ಕೆ ರಾವ್ ನಿರೂಪಿಸಿದರು.
ಸ್ವಯಂ ಸೇವಕರು ಯೋಜನಾಗೀತೆಯನ್ನು ಹಾಡಿದರು. ಶಿಕ್ಷಕವೃಂದ ಮತ್ತು ಎನ್ ಎಸ್ ಎಸ್ ಸ್ವಯಂ ಸೇವಕರು, ಪ್ರಥಮ ಪದವಿಯ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Latest News
- Udupi Sri Krishna Matha– Daily Schedule

- Daily Panchangam

- Kateel Mela Yakshagana details

- Today’s Rubber price (Kottayam and International market)

- Udupi Sri Krishna Alankara

