ಉಡುಪಿ: ಪ್ರತೀ ಬುಧವಾರದಂದು ಲಸಿಕಾ ಮೇಳ


ಉಡುಪಿ, ಜೂನ್ 07, 2022: ಜಿಲ್ಲೆಯಲ್ಲಿ ಕೋವಿಡ್ ಲಸಿಕಾ ಮೇಳವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗಳಿಗೆ ಭೇಟಿ ನೀಡಿ, 60 ವರ್ಷ ಮೇಲ್ಪಟ್ಟವರಲ್ಲಿ ಮುನ್ನೆಚ್ಚರಿಕಾ ಡೋಸ್ ಪಡೆಯಲು ಬಾಕಿ ಇರುವವರನ್ನು ಗುರುತಿಸಿ, ಬುಧವಾರ ನಡೆಯುವ ಲಸಿಕಾ ಮೇಳಕ್ಕೆ ಕಳುಹಿಸಬೇಕು. ಆಸ್ಪತ್ರೆಗೆ ಬರಲು ಸಾಧ್ಯವಾಗದ ಹಾಗೂ ಹಾಸಿಗೆ ಹಿಡಿದಿರುವ 60 ವರ್ಷ ಮೇಲ್ಪಟ್ಟವರಿದ್ದಲ್ಲಿ ಅವರಿಗೆ ಮೊಬೈಲ್ ಲಸಿಕಾ ಶಿಬಿರ ವ್ಯವಸ್ಥೆ ಮಾಡಿ, ಲಸಿಕೆ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಪಂಚಾಯತ್ ವ್ಯಾಪ್ತಿಯಲ್ಲಿ ವೈದ್ಯಾಧಿಕಾರಿಗಳೊಂದಿಗೆ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮ ಕಾರ್ಯಪಡೆ ಸದಸ್ಯರ ಸಮಿತಿ ಸಭೆ ನಡೆಸಿ, 60 ವರ್ಷ ಮೇಲ್ಪಟ್ಟವರಲ್ಲಿ ಮುನ್ನೆಚ್ಚರಿಕಾ ಡೋಸ್ ಪಡೆಯಲು ಬಾಕಿ ಇರುವವರನ್ನು ಗುರುತಿಸಿ, ಲಸಿಕೆ ನೀಡಬೇಕು. ಅಗತ್ಯವಿದ್ದಲ್ಲಿ ಪಂಚಾಯತ್ನಲ್ಲಿಯೇ ಬುಧವಾರ ಲಸಿಕಾ ಮೇಳ ಶಿಬಿರವನ್ನು ಆಯೋಜಿಸಬೇಕು ಅಥವಾ ಪಂಚಾಯತ್ ಕಾರ್ಯಪಡೆ ಸದಸ್ಯರು , ಆಶಾ ಕಾರ್ಯಕರ್ತೆಯರು ಮತ್ತು ಸಮುದಾಯದ ಮುಖಂಡರುಗಳ ಮೂಲಕ ಮನವೊಲಿಸಿ, ಲಸಿಕೆ ನೀಡಬೇಕು. ನಗರ ವ್ಯಾಪ್ತಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಸಭೆ ನಡೆಸಿ ಲಸಿಕೆ ನೀಡಲು ಕ್ರಮ ವಹಿಸಬೇಕು.
ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವತಿಯಿಂದ ಬುಧವಾರ ಲಸಿಕಾ ಮೇಳದ ಕುರಿತು ಮೈಕ್ ಮೂಲಕ ಪ್ರಚಾರ ನಡೆಸಿ, ಮುನ್ನೆಚ್ಚರಿಕಾ ಡೋಸ್ ಪಡೆಯುವಂತೆ ಕ್ರಮವಹಿಸಬೇಕು.
ಆರೋಗ್ಯ ಸಂಸ್ಥೆ ವ್ಯಾಪ್ತಿಯಲ್ಲಿರುವ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರೆಲ್ಲರಿಗೂ ಮುನ್ನೆಚ್ಚರಿಕಾ ಡೋಸ್ ನೀಡಬೇಕು.
ಕುಂದಾಪುರದ ಆದರ್ಶ ಆಸ್ಪತ್ರೆ, ಚಿನ್ಮಯಿ ಆಸ್ಪತ್ರೆ ಹಾಗೂ ವಿನಯ ಆಸ್ಪತ್ರೆ ಮತ್ತು ಉಡುಪಿಯ ಆದರ್ಶ ಹಾಗೂ ಮಿತ್ರ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಲಸಿಕೆ ಲಭ್ಯವಿದ್ದು, 18 ರಿಂದ 59 ವರ್ಷದೊಳಗಿನನವರು ಸರಕಾರಿ ಮಾರ್ಗಸೂಚಿಯಂತೆ ಖಾಸಗಿ ಆಸ್ಪತ್ರೆಯಲ್ಲಿ ಪಾವತಿಸಿ, ಮುನ್ನೆಚ್ಚರಿಕಾ ಡೋಸ್ ಪಡೆಯಬಹುದಾಗಿದೆ.