ಕಾಲು ಬಾಯಿ ರೋಗದ ವಿರುದ್ಧ ಲಸಿಕೆ ಅಭಿಯಾನ
![ಕಾಲು ಬಾಯಿ ರೋಗದ ವಿರುದ್ಧ ಲಸಿಕೆ ಅಭಿಯಾನ](https://thecanarapost.com/wp-content/uploads/2020/11/WhatsApp-Image-2020-10-31-at-5.19.21-PM-850x560.jpeg)
ಮಿತ್ತಬಾಗಿಲು ಗ್ರಾಮದ ಮನೆಮನೆಗೂ ತಲುಪುತ್ತಿದೆ ಈ ಮೂವರ ತಂಡ
ಶ್ವೇತಾ ಎಸ್
![](https://thecanarapost.com/wp-content/uploads/2020/11/WhatsApp-Image-2020-10-31-at-5.19.21-PM-1920x1200.jpeg)
ಬೆಳ್ತಂಗಡಿ , ನ 01: ಬೆಟ್ಟಗುಡ್ಡಗಳನ್ನು ಹತ್ತಿ ಇಳಿದು, ಹಳ್ಳ ಕೊಳ್ಳಗಳನ್ನು ದಾಟಿ ಈ ಮೂರು ಮಂದಿಯ ತಂಡ ದನಕರುಗಳಿರುವ ಪ್ರತಿಯೊಂದು ಮನೆಗೆ ಭೇಟಿ ಕೊಡುತ್ತಿದೆ.
‘ಕಾಲು ಮತ್ತು ಬಾಯಿ ರೋಗ’ದ ವಿರುದ್ಧದ ಹೋರಾಟದಲ್ಲಿ, ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಮಿತ್ತಬಾಗಿಲು ಗ್ರಾಮದಲ್ಲಿ ಅವರಿಗೆ ಇದು ಸುಲಭದ ಕೆಲಸವಲ್ಲ. ವ್ಯಾಕ್ಸಿನೇಟರ್ ಮೋನಪ್ಪ, ಕುಸುಮಾ ಮತ್ತು ಶಾರದಾ ಅವರನ್ನೊಳಗೊಂಡ ಮೂರು ಮಂದಿಯ ತಂಡ ಈಗಾಗಲೇ ಗ್ರಾಮದ 100 ಮನೆಯ ಸುಮಾರು 400 ದನಗಳಿಗೆ ಕಾಲು ಬಾಯಿ ರೋಗ ನಿರೋಧಕ ಲಸಿಕೆ ಹಾಕಿದೆ.
“ನಮ್ಮ ಹಳ್ಳಿಯಲ್ಲಿ ಸುಮಾರು 1,000 ದನಗಳಿಗೆ ಲಸಿಕೆ ನೀಡುವುದು ನಮ್ಮ ಗುರಿಯಾಗಿದೆ. ಈ ಲಸಿಕಾ ಕಾರ್ಯಕ್ರಮವು ಸರಕಾರದ ಒಂದು ಬಹಳ ಒಳ್ಳೆಯ ಕಾರ್ಯಕ್ರಮ. ಪೋಲಿಯೊ ವಿರುದ್ಧದ ಹೋರಾಟದ ಮಾದರಿಯಲ್ಲಿ ಇದನ್ನು ಮಾಡುತ್ತಾ ಇರುವುದು ಒಂದು ಒಳ್ಳೆಯ ಬೆಳವಣಿಗೆ,” ಎಂದು ಮಿತ್ತಬಾಗಿಲು ಹಾಲು ಉತ್ಪಾದಕರ ಸಂಘದ ಸಿಇಒ ಮೊನಪ್ಪ ಗೌಡ ಕೆನರಾ ಪೋಸ್ಟ್ ಗೆ ತಿಳಿಸಿದರು.
“ಸರ್ಕಾರವು ಪ್ರಾರಂಭಿಸಿದ ಅಭಿಯಾನದ ಬಗ್ಗೆ ಕೆಲವು ಜನರಿಗೆ ಹೆಚ್ಚು ಮಾಹಿತಿ ಇಲ್ಲ. ಇಂಥವರ ಮನೆಗೆ ಭೇಟಿ ನೀಡಿದಾಗ ನಾವು ಕಾರ್ಯಕ್ರಮದ ಬಗ್ಗೆ ಒಂದು ಸಣ್ಣ ಪರಿಚಯ ನೀಡುತ್ತೇವೆ. ಜನರು ತಕ್ಷಣ ಅದರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ವ್ಯಾಕ್ಸಿನೇಷನ್ ಮಾಡಲು ಒಪ್ಪುತ್ತಾರೆ” ಎಂದು ಅವರು ಹೇಳಿದರು.
ಲಸಿಕೆಯು ಉಚಿತವಾಗಿರುವುದರಿಂದ ಮತ್ತು ಕಾಲು ಬಾಯಿ ರೋಗವನ್ನು ತೆಡೆಗಟ್ವಲು ಶ್ರಮವಹಿಸುತ್ತಿರುವುದರಿಂದ ಎಲ್ಲರೂ ಈ ಲಸಿಕೆ ಗೆ ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ ಎನ್ನುತ್ತಾರೆ ಮೋನಪ್ಪ ಗೌಡ.