ಉಡುಪಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಕಡಿಮೆ ಕೋವಿಡ್ ಮರಣ: ಜಿಲ್ಲಾಧಿಕಾರಿ ಜಿ.ಜಗದೀಶ್

 ಉಡುಪಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಕಡಿಮೆ ಕೋವಿಡ್ ಮರಣ: ಜಿಲ್ಲಾಧಿಕಾರಿ ಜಿ.ಜಗದೀಶ್
Share this post

ಉಡುಪಿ, ಅ 10 : ಕೋವಿಡ್ 19 ನಿಂದ ಜಿಲ್ಲೆಯಲ್ಲಿ ಮರಣ ಹೊಂದಿರುವವರ ಪ್ರಮಾಣ
ಅತ್ಯಂತ ಕಡಿಮೆಯಾಗಿದ್ದು, ಇಡೀ ರಾಜ್ಯದಲ್ಲಿ ಈ ಸಾಧನೆ ಮಾಡಿರುವ 3 ಜಿಲ್ಲೆಗಳಲ್ಲಿ ಉಡುಪಿ ಒಂದಾಗಿದೆ. ಉಳಿದ 2 ಜಿಲ್ಲೆಗಳಲ್ಲಿ ಅತ್ಯಂತ ವಿಷಮ ಪರಿಸ್ಥಿತಿಯಲ್ಲಿ, ಸಾವಿನ ದವಡೆಯಲ್ಲಿದ್ದ ರೋಗಿಗಳನ್ನು , ಬೇರೆಡೆ ಸ್ಥಳಾಂತರಿಸಿ ಚಿಕಿತ್ಸೆ ನೀಡಿದ್ದು, ಉಡುಪಿ ಜಿಲ್ಲೆಯಲ್ಲಿ ಅಂತಹ ರೋಗಿಗಳಿಗೆ , ಜಿಲ್ಲೆಯಲ್ಲೇ ಚಿಕಿತ್ಸೆ ನೀಡಿ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದೇವೆ, ಇದಕ್ಕೆ ಮುಖ್ಯ ಕಾರಣ ಜಿಲ್ಲೆಯ ಕೋವಿಡ್ ಫ್ರಂಟ್‌ಲೈನ್ ವಾರಿಯರ್ಸ್ ಗಳು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ಅವರು ಶನಿವಾರ, ಉಡುಪಿಯ ಶಾಮಿಲಿ ಸಭಾಂಗಣದಲ್ಲಿ , ಜಿಲ್ಲೆಯ ಕೋವಿಡ್ ಫ್ರಂಟ್‌ಲೈನ್ ವಾರಿಯರ್ಸ್ ಗಳು, ತಮ್ಮ ಕ್ಷೇತ್ರಗಳಲ್ಲಿ ಯಾವುದೇ ಒತ್ತಡಗಳಿಗೆ ಒಳಗಾಗದೇ, ಮನೋಸ್ಥೆರ್ಯದಿಂದ ಕೆಲಸ ನಿರ್ವಹಿಸುವ ಕುರಿತು ಜಿಲ್ಲಾಡಳಿತದಿಂದ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಕೋವಿಡ್ ಫ್ರಂಟ್‌ಲೈನ್ ವಾರಿಯರ್ಸ್ ತಮಗೆ ವಹಿಸಲಾದ ಜವಾಬ್ದಾರಿಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ, ರೋಗಿಗಳ ಜೀವ ಉಳಿಸಲು ಆದ್ಯತೆ ನೀಡಿದ್ದರಿಂದ , ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣ ಕಡಿಮೆಯಾಗಿದೆ, ಇದಕ್ಕೆ ಇವರೆಲ್ಲರ ಪರಿಶ್ರಮವೇ ಕಾರಣ, ಅಲ್ಲದೇ ಕೊರೋನಾ ವಾರಿಯರ್ಸ್ ಗಳ ಸುರಕ್ಷತೆಗೆ ಸಹ ಹೆಚ್ಚಿನ ಮುಂಜಾಗ್ರತೆ ವಹಿಸಿದ್ದು, ಇದುವರೆಗೆ ಕೊರೋನಾ ವಾರಿರ‍್ಸ್ ಮರಣ ಹೊಂದಿಲ್ಲ. ಖಾಸಗಿ ಆಸ್ಪತ್ರೆಗಳ ಸಹಕಾರ ಉತ್ತಮವಾಗಿದ್ದು, ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

“ತೀರ ವಿಷಮ ಪರಿಸ್ಥಿತಿಯಲ್ಲಿರುವ ರೋಗಿಗಳ ಸಂಖ್ಯೆ ಸಹ ಕಡಿಮೆಯಾಗಿದೆ, ಜಿಲ್ಲಾಡಳಿತಕ್ಕೆ ಅತ್ಯಂತ ಕಷ್ಟಕರವಾಗಿದ್ದ ಕಾರ್ಯಗಳನ್ನು ಎಲ್ಲಾ ಅಧಿಕಾರಿ/ಸಿಬ್ಬಂದಿಗಳ ಸಹಕಾರದಿಂದ ಯಶಸ್ವಿಯಾಗಿ ನಿಭಾಯಿಸಲಾಗಿದೆ ,ಕೊರೋನ ಸಂಕಷ್ಟ ಕಾಲದಲ್ಲೂ ಸಹ ಸಾರ್ವಜನಿಕರಿಗೆ ಅಗತ್ಯವಿರುವ ಸೇವೆಗಳನ್ನು ಒದಗಿಸುತ್ತಿದ್ದು, ಕಂದಾಯ ಇಲಾಖೆಯ ಸೇವೆಗಳನ್ನು ನೀಡುವಲ್ಲಿ ಕಳೆದ 12 ತಿಂಗಳಿ0ದ ರಾಜ್ಯದಲ್ಲೇ ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ,” ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ. ಪ್ರಶಾಂತ ಭಟ್ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಮಾಹೆಯ ಉಪ ಕುಲಪತಿ ಲೆ.ಜನರಲ್ ಡಾ.ವೆಂಕಟೇಶ್, ಅಭಿನಂದನ ಶೆಟ್ಟಿ ಜಿಲ್ಲೆಯಲ್ಲಿ ಕೋವಿಡ್ ಫ್ರಂಟ್‌ಲೈನ್ ವಾರಿಯರ್ಸ್ ಗಳು, ಆತ್ಮಸ್ಥೈರ್ಯದಿಂದ ಯಾವುದೇ ಸಂದರ್ಭದಲ್ಲಿ ಸವಾಲುಗಳಿಗೆ ದೃತಿಗೆಡದೇ , ಕಾರ್ಯನಿರ್ವಹಿಸುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಡಿಹೆಚ್‌ಓ ಡಾ.ಸುಧೀರ್ ಚಂದ್ರ ಸೂಡಾ, ಕೆಎಂಸಿ ಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.

ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ. ಪ್ರಶಾಂತ ಭಟ್ ಸ್ವಾಗತಿಸಿದರು, ಡಾ. ಪ್ರೇಮಾನಂದ್ ವಂದಿಸಿದರು.

Subscribe to our newsletter!

Other related posts

error: Content is protected !!