ಈ ವರ್ಷದೊಳಗೆ ನೌಕರರ ವೇತನ ಪರಿಷ್ಕರಣೆ : ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ

 ಈ ವರ್ಷದೊಳಗೆ ನೌಕರರ ವೇತನ ಪರಿಷ್ಕರಣೆ : ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ
Share this post

ಉಡುಪಿ, ಜೂನ್ 26, 2022: ಇದೇ ವರ್ಷದ ಡಿಸೆಂಬರ್ ಒಳಗೆ ರಾಜ್ಯದ ಸರಕಾರಿ ನೌಕರರ ಬಹು ನಿರೀಕ್ಷಿತ 7 ನೇ ವೇತನ ಆಯೋಗದ ಸೌಲಭ್ಯಗಳನ್ನು ನೌಕರರಿಗೆ ದೊರಕಿಸುವಲ್ಲಿ ರಾಜ್ಯ ಸರಕಾರಿ ನೌಕರರ ಸಂಘ ಬದ್ದವಾಗಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಭರವಸೆ ನೀಡಿದರು. 

ಅವರು ಇಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆದ ಉಡುಪಿ ಜಿಲ್ಲಾ ಸರಕಾರಿ ನೌಕರರ ವಾರ್ಷಿಕ ಸಮಾವೇಶ 2021 ಮತ್ತು ಸೇವಾ ನಿವೃತ್ತಿಗೊಳ್ಳುತ್ತಿರುವ ಉಡುಪಿ ಜಿಲ್ಲಾ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಸರಕಾರಿ ನೌಕರರ 7 ನೇ ವೇತನ ಆಯೋಗದ ರಚನೆ ಕುರಿತಂತೆ ಒಂದು ತಿಂಗಳೊಳಗೆ ಸಮಿತಿ ರಚನೆಯಾಗಲಿದ್ದು, ಇದೇ ಡಿಸೆಂಬರ್ ಒಳಗೆ ಆರ್ಥಿಕ ಸೌಲಭ್ಯಗಳನ್ನು ನೌಕರರಿಗೆ ನೀಡುವಂತೆ ಸರಕಾರದ ಮೇಲೆ ಈಗಾಗಲೇ ಒತ್ತಡ ಹಾಕಲಾಗಿದ್ದು, ಡಿ ದರ್ಜೆ ನೌಕರರಿಗೆ   ರೂ.10000,ಸಿ ದರ್ಜೆ ನೌಕರರರಿಗೆ 20000, ಬಿ ದರ್ಜೆ ಅಧಿಕಾರಿಗಳಿಗೆ 30000 ಹಾಗೂ ,ಎ ದರ್ಜೆ ಅಧಿಕಾರಿಗಳಿಗೆ 40000 ರೂ ವರೆಗೆ  ವೇತನ ಹೆಚ್ಚಳವಾಗಲಿದೆ ಎಂದು ರಾಜ್ಯಾಧ್ಯಕ್ಷರು ಹೇಳಿದರು.

ರಾಜ್ಯದ ಸರ್ಕಾರಿ ನೌಕರರಿಗೆ ನಗದು ರಹಿತ 100% ಉಚಿತ ಆರೋಗ್ಯ ಚಿಕಿತ್ಸೆ ನೀಡುವ ಯೋಜನೆಯು ಶೀಘ್ರದಲ್ಲಿ ಜಾರಿಯಾಗಲಿದ್ದು, ಈ ಕುರಿತಂತೆ ಅಂತಿಮ ಸಭೆ ನಡೆಯಲಿದ್ದು, ಈ ಯೋಜನೆಯ ಮೂಲಕ ನೌಕರರು ಮತ್ತು ಅವರ ಅವಲಂಬಿತರು ಯಾವುದೇ ಕಾಯಿಲೆಗಳಿಗೆ 1 ಲಕ್ಷದಿಂದ 1 ಕೋಟಿಯ ವರೆಗೆ ಯಾವುದೇ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು , ರಾಜ್ಯದ 6 ಲಕ್ಷ ನೌಕರರ ಸಮಸ್ಯೆಗಳನ್ನು ಆಧ್ಯಯನ ಮಾಡಿ,ಇವುಗಳನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದು , ಯಾವುದೇ ಪ್ರತಿಭಟನೆ, ಮುಷ್ಕರಗಳಿಲ್ಲದೇ ಮನವಿ ನೀಡುವ ಮೂಲಕ ಹಂತಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ, ಸರಕಾರಿ ನೌಕರರ ಸೇವಾವಹಿಗಳನ್ನು ಆನ್‌ಲೈನ್ ಮಾಡಲಾಗುತ್ತಿದ್ದು, ಹೆಚ್.ಆರ್.ಎಂ.ಎಸ್, ಮಹಾಲೇಖಪಾಲರ ಕಚೇರಿ ಮತ್ತು ಖಜಾನೆಗಳನ್ನು ಪರಸ್ಪರ ಜೋಡಣೆ ಮಾಡುವ ಮೂಲಕ ನಿವೃತ್ತ ನೌಕರರು ನಿವೃತ್ತಿ ದಿನವೇ ಪಿಂಚಣಿ ಪಡೆಯುವಂತೆ ಯೋಜನೆ ರೂಪಿಸಲಾಗುತ್ತಿದೆ, ಕೆಜಿಐಡಿಯನ್ನು ಆನ್ ಲೈನ್ ಮಾಡಲಾಗಿದ್ದು ,ಅರ್ಜಿ ಸಲ್ಲಿಸಿದ 7 ದಿನಗಳ ಒಳಗೆ ಸಾಲದ ಮೊತ್ತ ಬ್ಯಾಂಕ್ ಖಾತೆಗೆ ಜಮೆ ಆಗುವ ಯೋಜನೆ 1 ತಿಂಗಳೊಳಗೆ ಜಾರಿಗೆ ತರುವ ಚಿಂತನೆಯಿದೆ ಎಂದರು.

2019 ರಿಂದ ಬಾಕಿ ಇರುವ ಕೆಜಿಐಡಿ ಬೋನಸ್ ಮೊತ್ತ 488 ಕೋಟಿ ರೂ ಒಂದು ವಾರದಲ್ಲಿ ಬಿಡುಗಡೆ ಆಗಲಿದೆ . ಎನ್.ಪಿ.ಎಸ್ ಬದಲು ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರುವ ಕುರಿತಂತೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿದ್ದು, ರಾಜ್ಯದ ಸರ್ಕಾರಿ ನೌಕರರ ಹಿತ ಕಾಪಾಡುವುದಾಗಿ ಭರವಸೆ ನೀಡಿದ್ದಾರೆ. ರಾಜ್ಯದ ವಿವಿಧ ಇಲಾಖೆಗಳ ಎಲ್ಲಾ ನೌಕರರ ಸಮಸ್ಯೆಗಳ ಕುರಿತು ,ಸಂಘದ ವತಿಯಿಂದ ಸರ್ಕಾರದೊಂದಿಗೆ ಚರ್ಚಿಸಿ ಸೂಕ್ತ ನ್ಯಾಯ ಒದಗಿಸಲಾಗುವುದು ಎಂದು ಹೇಳಿದರು.

ಮಿಷನ್ ಆಸ್ಪತ್ರೆ ಸರ್ಕಲ್ ಬಳಿಯಿಂದ  ತೆರೆದ ಜೀಪ್ ನಲ್ಲಿ ಸುಬ್ರಹ್ಮಣ್ಯ ಶೇರಿಗಾರ್ ಅವರ ಅಭಿನಂದನಾ ಮೆರವಣಿಗೆ ನಡೆಯಿತು.ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸುಬ್ರಹ್ಮಣ್ಯ ಶೇರಿಗಾರ್ ದಂಪತಿಯನ್ನು ಸನ್ಮಾನಿಸಲಾಯಿತು.ಅಭಿನಂದನೆ ಸ್ವೀಕರಿಸಿ ಮಾತನಾಡಿದ, ಸುಬ್ರಹ್ಮಣ್ಯ ಶೇರಿಗಾರ್ ,ತಮ್ಮ  ವೃತ್ತಿ ಜೀವನ ಮತ್ತು ಸಂಘಟನೆಯಲ್ಲಿ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!