ಗ್ರಾಮ ಮಟ್ಟದಲ್ಲಿ ಅತ್ಯುತ್ತಮ ಸೇವೆ ನೀಡಲು ಗ್ರಾಮ ಒನ್ ಆರಂಭ: ಪೊನ್ನುರಾಜ್

 ಗ್ರಾಮ ಮಟ್ಟದಲ್ಲಿ ಅತ್ಯುತ್ತಮ ಸೇವೆ ನೀಡಲು ಗ್ರಾಮ ಒನ್ ಆರಂಭ: ಪೊನ್ನುರಾಜ್
Share this post

ಮಂಗಳೂರು,ಜೂ.21, 2022: ಸಾಮಾನ್ಯ ಸೇವಾ ಕೇಂದ್ರಗಳಿಗಿಂತಲೂ ಅತ್ಯುತ್ತಮವಾದ ಸೇವೆ ಒದಗಿಸುವ ನಿಟ್ಟಿನಲ್ಲಿ ಗ್ರಾಮ ಒನ್ ಆರಂಭಿಸಲಾಗಿದ್ದು, ಇದು ಮುಖ್ಯಮಂತ್ರಿಗಳ ಅತಿ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ರಾಜ್ಯ ಸರ್ಕಾರದ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ವಿ. ಪೊನ್ನುರಾಜ್ ತಿಳಿಸಿದರು.

 ಅವರು ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ಗ್ರಾಮ ಒನ್ ಆಪರೇಟರ್‍ಗಳ ತರಬೇತಿಯಲ್ಲಿ ಸಂವಾದ ನಡೆಸಿದರು.

ಗ್ರಾಮ ಒನ್‍ನಲ್ಲಿ ಸರ್ಕಾರದ 500 ರಿಂದ 800 ಸೇವೆಗಳನ್ನು ಗ್ರಾಮಸ್ಥರಿಗೆ ನೀಡುವ ಉದ್ದೇಶ ಹೊಂದಲಾಗಿದೆ, ಅದರಲ್ಲಿ ಫಲಾನುಭವಿಗಳಿಗೆ ಪ್ರಮಾಣ ಪತ್ರಗಳನ್ನು ನೀಡುವುದರ ಜತೆಗೆ ಸರ್ಕಾರದ ವಿವಿಧ ಯೋಜನೆಗಳನ್ನು ಆದ್ಯತೆಯ ಮೇರೆಗೆ ಅರ್ಹರಿಗೆ ತಲುಪಿಸಲಾಗುವುದು, ಆದರೆ ಪ್ರತ್ಯೇಕವಾಗಿ ಖಾಸಗಿಯಾಗಿ ಸೇವೆ ಸಲ್ಲಿಸುವ ಅವಕಾಶವಿರುವುದಿಲ್ಲ, ಪ್ರಾರಂಭದಲ್ಲಿ ಫ್ರಾಂಚೈಸಿಗಳು ಕಡಿಮೆ ಇದ್ದಲ್ಲಿ ಅದರ ಸಂಖ್ಯೆಗಳನ್ನು ಹೆಚ್ಚು ಮಾಡಲಾಗುವುದು ಎಂದರು.

ಗ್ರಾಮ ಒನ್‍ನಲ್ಲಿ ಬಸ್ಸು, ರೈಲು ಟಿಕೇಟ್‍ಗಳು, ವಾಹನಗಳ ವಿಮೆ ಸೇರಿದಂತೆ ವಿವಿಧ ರೀತಿಯ ವಿಮೆಗಳನ್ನು ಮಾಡಿಸುವುದು ಹಾಗೂ ಬ್ಯಾಂಕಿಂಗ್ ವಹಿವಾಟಿಗೆ ಅನುಕೂಲ ಮಾಡಿಕೊಡುವಂತಹ ಅವಕಾಶಗಳನ್ನು ಮುಂದೆ ಕಲ್ಪಿಸಿಕೊಡಲಾಗುವುದು ಎಂದ ಅವರು,  ಈ ಕೇಂದ್ರಗಳು ಸರ್ಕಾರದ ಕಚೇರಿಗಳಂತೆ ಸೇವೆ ನೀಡುವ ವಾತಾವರಣ ಹೊಂದಿರಬೇಕು, ಆದರೆ ಕಿರಾಣಿ ಅಂಗಡಿಗಳಂತೆ ಇರಬಾರದು ಎಂದು ಹೇಳಿದರು.

ಸರ್ಕಾರದಿಂದ ನೀಡಲಾಗುವ ಸೇವೆ ಒದಗಿಸುವುದು ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾತ್ರ ಮಾಡಲು ಅವಕಾಶವಿರುತ್ತದೆ, ಇಲ್ಲಿ ಶಿಸ್ತು ಬಹಳ ಮುಖ್ಯ. ಈ ಕೇಂದ್ರಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇವೆ ನೀಡುವ ಪಟ್ಟಿಯನ್ನು ನೀಡಲಾಗುವುದು, ಅದರಂತೆಯೇ ಕಾರ್ಯನಿರ್ವಹಿಸಬೇಕು, ಲೈಸೆನ್ಸ್ ಪಡೆದವರು ಮಾತ್ರ ಈ ಕೇಂದ್ರಗಳನ್ನು ನಡೆಸಬೇಕು ಎಂದು ತಿಳಿಸಿದರು.

 ದಿನದಲ್ಲಿ 12 ತಾಸು ಕೆಲಸ ನಿರ್ವಹಿಸಬೇಕು ಹಾಗೂ ಎಲ್ಲಾ ದಿನಗಳಲ್ಲಿಯೂ ಕೆಲಸ ಮಾಡಲು ಶಕ್ತರಾಗಿರಬೇಕು ವಾರಕ್ಕೆ ಒಂದು ರಜೆ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ, ಒಟ್ಟಾರೆ ಸರ್ಕಾರಿ ಕಚೇರಿಯಂತೆ ಸೇವೆ ನೀಡುವ ಜನಸೇವ ಕೇಂದ್ರಗಳಾಗಿ ಇವು ಹೊರಹೊಮ್ಮಬೇಕು ಎನ್ನುವುದು ಮುಖ್ಯಮಂತ್ರಿಗಳ ಆಶಯವಾಗಿದೆ ಎಂದವರು ವಿವರಿಸಿದರು.

ಗ್ರಾಮಗಳಿರುವ ಜನಸಂಖ್ಯೆಯ ಆಧಾರದ ಮೇಲೆ ಈ ಕೇಂದ್ರಗಳನ್ನು ತೆರೆಯಲಾಗುತ್ತಿದೆ, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗವಕಾಶ ಒದಗಿಸುವುದು ಹಾಗೂ ಆ ಮೂಲಕ ಸರ್ಕಾರದ ಸೇವೆಗಳನ್ನು ಜನರಿಗೆ ತಲುಪಿಸುವುದು ಈ ಯೋಜನೆಯ ಚಿಂತನೆಯಾಗಿದೆ, ಮುಂಬರುವ ದಿನಗಳಲ್ಲಿ ತಾಲೂಕುವಾರು ಪ್ರತ್ಯೇಕವಾಗಿ ಈ ರೀತಿಯ ತರಬೇತಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

 ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಮಾತನಾಡಿ, ಗ್ರಾಮ ಒನ್ ಕೇಂದ್ರಗಳನ್ನು ಪ್ರಾರಂಭಿಸುವ ಆಸಕ್ತರು ಪಿಎಂಇಜಿಪಿ, ಮುದ್ರಾ ಸೇರಿದಂತೆ ವಿವಿಧ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ, ಮುಂದಿನ ದಿನಗಳಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಮೂಲಕ ಬ್ಯಾಂಕ್‍ಗಳು ನೀಡುವ ಸಾಲ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಇಡಿಸಿಎಸ್ (ಡೈರೆಕ್ಟರ್ ಆಫ್ ಇಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ ಸರ್ವಿಸಸ್) ನಿರ್ದೇಶಕ ದಿಲೀಪ್ ಶಶಿ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹಾಗೂ ಗ್ರಾಮ ಯೋಜನಾ ನಿರ್ದೇಶಕ ವರಪ್ರಸಾದ್ ರೆಡ್ಡಿ ವೇದಿಕೆಯಲ್ಲಿದ್ದರು.

ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಗ್ರಾಮ ಒನ್ ಆಪರೇಟರ್‍ಗಳು ತರಬೇತಿಯಲ್ಲಿ ಭಾಗವಹಿಸಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!