ಕೊಲ್ಲೂರು ದೇವಸ್ಥಾನದ ಭೋಜನ ಪ್ರಸಾದಕ್ಕೆ ರಾಷ್ಟ್ರೀಯ ಸುರಕ್ಷತಾ ಗುಣಮಟ್ಟದ ಮಾನ್ಯತೆ

 ಕೊಲ್ಲೂರು ದೇವಸ್ಥಾನದ ಭೋಜನ ಪ್ರಸಾದಕ್ಕೆ ರಾಷ್ಟ್ರೀಯ ಸುರಕ್ಷತಾ ಗುಣಮಟ್ಟದ ಮಾನ್ಯತೆ
Share this post

ವಿಶೇಷ ಲೇಖನ

ರಾಜ್ಯದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ರಾಜ್ಯ ಹಾಗೂ ಹೊರ ರಾಜ್ಯದ ಭಕ್ತಾದಿಗಳು ಮಾತ್ರವಲ್ಲದೇ ವಿದೇಶದಿಂದಲೂ ಭಕ್ತರೂ ಆಗಮಿಸಿ ಮೂಕಾಂಬಿಕೆಯ ದರ್ಶನ ಪಡೆಯುತ್ತಿದ್ದಾರೆ.

ಕೊಲ್ಲೂರು ದೇವಾಲಯಲಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ದೇವಾಲಯದ ವತಿಯಿಂದ ಉಚಿತ ಭೋಜನ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದ್ದು, ಇಲ್ಲಿ ದೇವರಿಗೆ ಅರ್ಪಿಸುವ ನೈವೇದ್ಯ ಮತ್ತು ಭಕ್ತರಿಗೆ ನೀಡುವ ಭೋಜನ ಪ್ರಸಾದವು ಗರಿಷ್ಠ ಗುಣಮಟ್ಟದಿಂದ ಕೂಡಿದ್ದು, ಆರೋಗ್ಯಕ್ಕೆ ಅತ್ಯಂತ ಸುರಕ್ಷಿತವಾದುದು ಎಂದು ಭಾರತದ ಅಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಪ್ರಮಾಣ ಪತ್ರ ಪಡೆದಿದೆ.

ಇಲ್ಲಿ ಭಕ್ತಾದಿಗಳಿಗೆ ತಯಾರಿಸುವ ಆಹಾರದ ಗುಣಮಟ್ಟವನ್ನು ಪರಿಶೀಲಿಸಲು ಆಹಾರ ತಯಾರಿಕಾ ಕಟ್ಟಡ ಮತ್ತು ಅಲ್ಲಿರುವ ಸೌಲಭ್ಯಗಳು, ಆಹಾರ ತಯಾರಿಸುವ ವಿಧಾನ, ಸ್ವಚ್ಛತೆ, ಆಹಾರ ತಯಾರಿಕಾ ಸಿಬ್ಬಂದಿಗಳಿಗೆ ನೀಡಿರುವ ತರಬೇತಿ ಈ ಅಂಶಗಳ ಆಧಾರದಲ್ಲಿ ಆಡಿಟ್ ಮಾಡಲಾಗಿದ್ದು, ದೇವಾಲಯದಲ್ಲಿ ಈ ಎಲ್ಲಾ ಅಂಶಗಳಿಗೆ ಪ್ರಾಧಾನ್ಯತೆ ನೀಡಿ ಆಹಾರ ತಯಾರಿಸುತ್ತಿರುವುದರಿಂದ ಈ ಪ್ರಮಾಣ ಪತ್ರ ನೀಡಲಾಗಿದೆ.

ಇಲ್ಲಿನ ದೇವಾಲಯದ ಆಹಾರ ತಯಾರಿಕಾ ಕೊಠಡಿಯು ಅತ್ಯಂತ ಸುಸಜ್ಜಿತವಾಗಿದ್ದು, ಕಟ್ಟಡವು ಮಳೆ ನೀರಿನಿಂದ ಸೋರುವಿಕೆ ಇಲ್ಲದೇ , ಉತ್ತಮ ಗುಣಮಟ್ಟದ ಗೋಡೆ ಹಾಗೂ ಕಾಲು ಜಾರದೇ ಇರುವ ನೆಲಹಾಸು ಸೌಲಭ್ಯ, ತುಕ್ಕು ಹಿಡಿಯದ ಕಿಟಕಿ ಬಾಗಿಲುಗಳು, ಆಹಾರ ತಯಾರಿಕೆಗೆ ಬಳಸುವ ಪಾತ್ರೆಗಳ ಗುಣಮಟ್ಟ, ಕಲಾಯಿ ಹಾಕಿರುವುದು, ಉತ್ತಮ ಗಾಳಿ ಬೆಳಕು ಸೌಲಭ್ಯ , ಆಹಾರವನ್ನು ಬಿಸಿ ಮತ್ತು ತಂಪು ಮಾಡಲು ಬಳಸುವ ಯಂತ್ರೋಕರಣಗಳ ಸೌಲಭ್ಯ, ಆಹಾರ ತಯಾರಿಕಾ ಸಾಮಗ್ರಿಗಳನ್ನು ದಾಸ್ತಾನು ಮಾಡಲು ಬಳಸುವ ಉತ್ತಮ ಕೊಠಡಿ ಸೌಲಭ್ಯವನ್ನು , ಪಾತ್ರೆಗಳನ್ನು ತೊಳೆ ನೀರು ಮತ್ತು ಆಹಾರ ತಯಾರಿಕೆ ಸಮಯದಲ್ಲಿ ಉಳಿದ ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಲಾಗುತ್ತಿದೆ.

ಆಹಾರ ತಯಾರಿಕೆಗೆ ಬಳಸುವ ಸಾಮಗ್ರಿಗಳು ಆಹಾರ ಸುರಕ್ಷತಾ ಪ್ರಮಾಣ ಪತ್ರ ಹೊಂದಿರುವ ಸರಬರಾಜುದಾರರ ಮೂಲಕವೇ ಖರೀದಿಸುತ್ತಿದ್ದು, ಯಾವುದೇ ಒಡೆದ ಆಹಾರ ಪ್ಯಾಕೆಟ್ ಗಳನ್ನು ಬಳಸುತ್ತಿಲ್ಲ. ಸರಬರಾಜು ಆದ ಆಹಾರ ಪದಾರ್ಥಗಳ ಅವಧಿ ಮೀರುವ ದಿನಾಂಕವನ್ನು ಪರಿಶೀಲಿಸುತ್ತಿದ್ದು, ಆ ಪದಾರ್ಥಗಳನ್ನು ಉಷ್ಣಾಂಶಕ್ಕೆ ತಕ್ಕಂತೆ ಕೆಡದಂತೆ ಇಡಲು ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದು, ಎಲ್ಲಾ ಪದಾರ್ಥಗಳನ್ನು ನಿರ್ದಿಷ್ಠ ಸ್ಥಳದಲ್ಲಿ ಶೇಖರಿಸಲಾಗುತ್ತಿದೆ. ಸೂಕ್ತ ಶೈತ್ಯಾಗಾರ ಮತ್ತು ಉಷ್ಣಾಗಾರಗಳ ಸೌಲಭ್ಯಗಳನ್ನು ಹೊಂದಿದ್ದು, ಆಹಾರ ಸರಬರಾಜು ವಾಹನ ಸಹ ಸ್ವಚ್ಚತೆಯಿಂದ ಕೂಡಿರುವಂತೆ ನೋಡಿಕೊಳ್ಳಲಾಗುತ್ತಿದೆ.

ಆಹಾರ ಬಡಿಸುವ ಪಾತ್ರೆಗಳನ್ನು ಸಹ ಸ್ವಚ್ಛವಾಗಿರುವಂತೆ ನೋಡಿಕೊಂಡಿದ್ದು, ಆಹಾರ ನೀಡುವ ಸ್ಥಳದಲ್ಲಿ ಗರಿಷ್ಠ ಸ್ವಚ್ಛತೆಗೆ ಆದ್ಯತೆ ನೀಡಿದೆ. ಈ ಪ್ರದೇಶವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದ್ದು, ಈ ಸ್ಥಳಕ್ಕೆ ಯಾವುದೇ ಕ್ರಿಮಿ ಕೀಟಗಳು ಬಾರದಂತೆ ಮತ್ತು ಬೆಳವಣಿಗೆಯಾಗದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ನಿತ್ಯವೂ ಕೈಗೊಳ್ಳಲಾಗುತ್ತಿದೆ.

ದೇವಾಲಯದಲ್ಲಿ ಆಹಾರ ಬಡಿಸುವವರಿಗೂ ಸಹ ಎಲ್ಲಾ ರೀತಿಯ ತರಬೇತಿ ನೀಡಿದ್ದು, ಸ್ವಚ್ಛತಯನ್ನು ಕಾಪಾಡಿಕೊಂಡು ಆಹಾರ ಬಡಿಸುವಂತೆ ನಿರ್ದೇಶನಗಳನ್ನು ನೀಡಿದ್ದು, ಅನಾರೋಗ್ಯ ಲಕ್ಷಣಗಳಿರುವ ಸಿಬ್ಬಂದಿಗಳಿಗೆ , ಆಹಾರ ತಯಾರಿಕಾ ಕೊಠಡಿ ಪ್ರವೇಶಿಸದಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದ್ದು, , ಈ ಎಲ್ಲಾ ಅಂಶಗಳ ಬಗ್ಗೆ ನಿರಂತರ ಪರಿಶೀಲನೆ ಸಹ ನಡೆಸಲಾಗುತ್ತಿದೆ. ಒಂದು ಬಾರಿ ಮಾಡಿದ ಆಹಾರ ಉಳಿದರೆ ಅದನ್ನು ಮರು ಬಳಕೆ ಮಾಡದೇ ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುತ್ತಿದ್ದು, ಒಮ್ಮೆ ಕರಿದ ಎಣ್ಣೆಯನ್ನೂ ಸಹ ಮರು ಬಳಕೆ ಮಾಡುವುದಿಲ್ಲ. ಸಿಬ್ಬಂದಿಗಳಿಗೂ ಆಹಾರ ಸುರಕ್ಷತೆಯನ್ನೂ ಕಾಪಾಡುವ ಕುರಿತಂತೆ ತರಬೇತಿಯನ್ನೂ ಸಹ ನೀಡಲಾಗಿದೆ.

ಈ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು , ಕೊಲ್ಲೂರು ಶ್ರೀ ಮೂಕಾಂಬಿಕ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅತ್ಯಂತ ಪರಿಶುದ್ದ, ಸುರಕ್ಷಿತ ಮತ್ತು ಗುಣಮಟ್ಟದ ಭೋಜನ ಪ್ರಸಾದವನ್ನು ನೀಡಲಾಗುತ್ತಿದ್ದು, ಭಾರತ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಪ್ರಮಾಣಪತ್ರವನ್ನು ನೀಡಿದ್ದಾರೆ.

ಕೊಲ್ಲೂರು ದೇವಸ್ಥಾನದಲ್ಲಿ ಭಕ್ತರಿಗೆ ನೀಡುವ ಭೋಜನ ಪ್ರಸಾದವು ಅತ್ಯಂತ ಸುರಕ್ಷಿತ ಮತ್ತು ಗುಣಮಟ್ಟದಿಂದ ಕೂಡಿದೆ ಎಂದು ಭಾರತ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂಧ ಅನುಮತಿ ಪಡೆಯಲು ಬೇಕಾದ ಅಂಶಗಳ ಪಾಲನೆ ಕುರಿತಂತೆ ,ದೇವಾಲಯದ ಎಲ್ಲಾ ಸಿಬ್ಬಂದಿಗೆ ಮಾಹಿತಿ ಹಾಗೂ ಅಗತ್ಯ ತರಬೇತಿಯನ್ನು ನೀಡಿದ್ದು, ಈ ಬಗ್ಗೆ ಆಗಿಂದಾಗ್ಗೆ ಪರಿಶೀಲನೆ ನಡೆಸಿ, ಅಗತ್ಯ ಸಲಹೆಗಳನ್ನು ನೀಡಲಾಗಿದೆ ಎಂದು ಜಿಲ್ಲಾ ಆಹಾರ ಮತ್ತು ಗುಣಮಟ್ಟ ನಿಯಂತ್ರಣಾ ಅಧಿಕಾರಿ ಡಾ.ಪ್ರೇಮಾನಂದ್ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!