ಕಡಲ ಕೊರೆತ ತಡೆಗೋಡೆ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ: ಸಚಿವ ಎಸ್. ಅಂಗಾರ

 ಕಡಲ ಕೊರೆತ ತಡೆಗೋಡೆ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ: ಸಚಿವ ಎಸ್. ಅಂಗಾರ
Share this post

ಮಂಗಳೂರು, ಜೂನ್ 22, 2021: ಚಂಡಮಾರುತ ಹಾಗೂ ಮಳೆಯ ಪ್ರಭಾವದಿಂದ ತೀವ್ರ ಸಮುದ್ರ ಕೊರೆತ ತಡೆಗೋಡೆ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಆಧ್ಯತೆಯ ಮೇಲೆ ಕೈಗೊಂಡು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ತಿಳಿಸಿದರು.

ಅವರು ಇಂದು ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಸಮುದ್ರ ಕೊರೆತ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ನೀಡಿರುವ ಅನುದಾನ ಹಾಗೂ ಬಂದರುಗಳ ಅಭಿವೃದ್ಧಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸ್ತುತ ಸಾಲಿನ ಸಮುದ್ರ ಕೊರೆತ ಕಾಮಗಾರಿಗಳನ್ನು ಕೈಗೊಳ್ಳಲು ಕರಾವಳಿಯ ಮೂರು ಜಿಲ್ಲೆಗಳಿಗೆ 35 ಕೋಟಿ ಅನುದಾನ ಒದಗಿಸಲಾಗಿದೆ. ಮುಂದುವರೆದ ಕಾಮಗಾರಿಗಳಿಗೆ ಅವಶ್ಯವಿರುವ 70 ಕೋಟಿಯ ಹೆಚ್ಚುವರಿ ಅನುದಾನದ ಪ್ರಸಾವನೆಯನ್ನು ಆರ್ಥಿಕ ಇಲಾಖೆಗೆ ಕಳುಹಿಸಿರುವುದನ್ನು ಮುಖ್ಯ ಮಂತ್ರಿಗಳು ಒಪ್ಪಿಗೆ ಸೂಚಿಸಿರುತ್ತಾರೆ ಎಂದರು.

ಕಡಲ ಕೊರೆತಕ್ಕೆ ಸಂಬಂಧಿಸಿದಂತೆ ಕಳೆದ 3 ವರ್ಷಗಳಿಂದ ಬಾಕಿಯಿರುವ ಕಾಮಗಾರಿಗಳನ್ನು ಪ್ರಸ್ತುತ ಸಾಲಿನ ಬಂದರು ಇಲಾಖೆಯ ಕ್ರಿಯಾ ಯೋಜನೆಗೆ ಸೇರಿಸಿ ಅದಕ್ಕೆ ಅಗತ್ಯವಿರುವ ಅನುದಾನವನ್ನು ಒದಗಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿ ಎಂದು ಸೂಚನೆ ನೀಡಿದರು.

ಏಷ್ಯ ಡೆವಲೆಪ್‍ಮೆಂಟ್ ಬ್ಯಾಂಕ್‍ನ ಆರ್ಥಿಕ ಸಹಕಾರದೊಂದಿಗೆ ಈಗಾಗಲೇ ಪೂರ್ಣಗೊಂಡಿರುವ ಶಾಶ್ವತ ಸಮುದ್ರ ಕೊರೆತ ಕಾಮಗಾರಿಗಳ ನಿರ್ವಹಣೆಗೆ ಅಗತ್ಯವಿರುವ ಕ್ರಿಯಾಯೋಜನೆಗಳನ್ನು ರೂಪಿಸಿ ಇದಕ್ಕೆ ಅಗತ್ಯವಿರುವ ಅನುದಾನದ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಇದರ ಜೊತೆಯಲ್ಲಿ ಸಮಗ್ರ ತಾಂತ್ರಿಕ ಅಧ್ಯಯನ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಸೂಚನೆ ನೀಡಿದರು.

ಈಗಾಗಲೇ ಕೈಗೊಂಡಿರುವ 10 ವಿವಿಧ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿರುವ ಕಾರ್ಯಕ್ಕೆ ಗುತ್ತಿಗೆದಾರರು ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ತಡೆಯಾಜ್ಞೆ ನೀಡಿರುತ್ತದೆ. ಇದನ್ನು ತೆರವುಗೊಳಿಸಲು ಮೇಲ್ಮನವಿಯನ್ನು ಸಲ್ಲಿಸಿ ತೆರವುಗೊಳಿಸಲು ಮುಂದಾಗಬೇಕು ಎಂದು ಸೂಚನೆ ನೀಡಿದರು.

ಸಾಗರಮಾಲಾ ಯೋಜನೆಯಡಿ ಮಂಗಳೂರಿನ ಮರೀನಾ ಯೋಜನೆಯನ್ನು 340 ಕೋಟಿ ರೂ. ಗಳಲ್ಲಿ ಪ್ರಸ್ತಾವಣೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಈ ಯೋಜನೆಯ ನೀಲಿನಕಾಶೆ ಹಾಗೂ ಪಕ್ಷಿನೋಟಕ್ಕೆ ಅನುಮೋದನೆ ಸಲ್ಲಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಸೂಚನೆ ನೀಡಿದರು.

ಕಡಲ ತೀರದಲ್ಲಿರುವ ಮೀನುಗಾರರ ಮನೆಗಳು ನೆರೆ ಸೇರಿದಂತೆ ಕಡಲ ಕೊರೆತದಿಂದ ಹಾನಿ ಉಂಟಾದಲ್ಲಿ ಅವರ ಮನೆಗಳಿಗೆ ಅಧೀಕೃತ ದಾಖಲೆಗಳನ್ನು ಪಡೆದು ಅವರುಗಳಿಗೆ ಮತ್ಸ್ಯಾಶ್ರಯ ಯೋಜನೆಯಡಿ ಕಾನೂನಾತ್ಮಕ ಪರಿಹಾರವನ್ನು ನೀಡಬೇಕೆಂದು ಸೂಚನೆ ನೀಡಿದರು.

ಸಂಸದ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಮರೀನಾ, ಗುರುಪುರ ಮತ್ತು ನೇತ್ರಾವತಿ ನದಿಗಳಲ್ಲಿ ಸರಕು ಸಾಗಾಣಿಕೆ ದ್ವೀಪಗಳ ಅಭಿವೃದ್ಧಿ ಸೇರಿದಂತೆ ಪ್ರವಾಸೋಧ್ಯಮ ಚಟುಚಟಿಕೆಗಳನ್ನು ಕೈಗೊಳ್ಳಲು 340 ಕೋಟಿ ವೆಚ್ಚದಲ್ಲಿ ಸಾಗರಮಾಲಾ ಯೋಜನೆ ಹಾಗೂ ಇನ್‍ಲ್ಯಾಂಡ್ ವಾಟರ್ ವೇವ್ಸ್ ಅಥಾರಿಟಿ ಆಫ್ ಇಂಡಿಯಾ ಸಹಯೋಗದಿಂದ ಕೈಗೊಳ್ಳಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಯಡಿ ಮಂಗಳೂರಿನ ಹಳೆ ಬಂದರಿನ ಕ್ಯಾಪಿಟಲ್ ಡ್ರೆಜ್ಜಿಂಗ್ ಕಾಮಗಾರಿ ಹಾಗೂ ಕೋಸ್ಟಲ್ ಬರ್ತ್ ನಿರ್ಮಾಣ ಕಾಮಗಾರಿಗಳನ್ನು ಕ್ರಮವಾಗಿ 29 ಕೋಟಿ ಹಾಗೂ 65 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು.

ಸಭೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ, ಶಾಸಕರಾದ ಉಮಾನಾಥ್ ಕೋಟ್ಯಾನ್, ವೇದವ್ಯಾಸ್ ಕಾಮತ್, ಯು.ಟಿ.ಖಾದರ್, ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ಹಾಗೂ ಮತ್ತಿತರರ ಅಧಿಕಾರಿಗಳು ಉಪಸ್ಥಿತರಿದ್ದರು

Subscribe to our newsletter!

Other related posts

error: Content is protected !!