ಮೇ.15 ರವರೆಗಿನ ಸಭೆ ಸಮಾರಂಭ ನಡೆಸಲು ಮಾತ್ರ ಅವಕಾಶ: ಕೋಟ ಶ್ರೀನಿವಾಸ ಪೂಜಾರಿ

 ಮೇ.15 ರವರೆಗಿನ ಸಭೆ ಸಮಾರಂಭ ನಡೆಸಲು ಮಾತ್ರ ಅವಕಾಶ:  ಕೋಟ ಶ್ರೀನಿವಾಸ ಪೂಜಾರಿ
Share this post

ಮಂಗಳೂರು, ಮೇ 06, 2021: ಜಿಲ್ಲೆಯಾದ್ಯಂತ ಪೂರ್ವ ನಿಗದಿತವಾಗಿರುವ  ಸಭೆ  ಸಮಾರಂಭಗಳನ್ನು ನಡೆಸಲು ಮೇ.15 ರವರೆಗೆ ಮಾತ್ರ ಅವಕಾಶ ನೀಡಬೇಕು, ಹೊಸದಾಗಿ ಯಾವುದೇ ಸಭೆ ಸಮಾರಂಭ ಮಾಡಲು ಅವಕಾಶ ನೀಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: ಕೋವಿಡ್-19 ನಿಯಂತ್ರಣಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಬಿಗಿ ಕ್ರಮ

ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ 19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ನ್ನು ಜಾರಿಗೊಳಿಸುವ ಬಗ್ಗೆ ಚರ್ಚಿಸಲು  ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಅಗತ್ಯ ವಸ್ತುಗಳ ಖರೀದಿಗೆ  ಬೆಳಗ್ಗೆ 6 ಗಂಟೆಯಿಂದ ಬೆಳಿಗ್ಗೆ 9 ಗಂಟೆಯವರೆಗೆ ಮಾತ್ರ ಅವಕಾಶ ನೀಡಿ 10 ಗಂಟೆಯೊಳಗೆ ಪ್ರತಿಯೊಬ್ಬರು ಮನೆ ಸೇರಿಕೊಳ್ಳುವಂತೆ ನೋಡಿಕೊಳ್ಳಬೇಕು

ಕೋಟ ಶ್ರೀನಿವಾಸ ಪೂಜಾರಿ

ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕರ್ಫ್ಯೂವನ್ನು ಜಿಲ್ಲೆಯಲ್ಲಿ ಮತ್ತಷ್ಟು ಬಿಗಿಗೊಳಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಅಗತ್ಯ ವಸ್ತುಗಳ ಖರೀದಿಗೆ  ಬೆಳಗ್ಗೆ 6 ಗಂಟೆಯಿಂದ ಬೆಳಿಗ್ಗೆ 9 ಗಂಟೆಯವರೆಗೆ ಮಾತ್ರ ಅವಕಾಶ ನೀಡಿ 10 ಗಂಟೆಯೊಳಗೆ ಪ್ರತಿಯೊಬ್ಬರು ಮನೆ ಸೇರಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಕೊರೋನ ಕರ್ಫ್ಯೂ ಜಾರಿಗೆ ತಂದು 8 ದಿನಗಳಾದರೂ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ, ಸಾರ್ವಜನಿಕರು ಅನಗತ್ಯವಾಗಿ ಸಣ್ಣಪುಟ್ಟ ನೆಪಗಳನ್ನು ಹೇಳಿಕೊಂಡು ಅನಾವಶ್ಯಕವಾಗಿ ಓಡಾಡುತ್ತಿರುವುದು, ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸದೇ ಇರುವುದು ಇದಕ್ಕೆ ಕಾರಣವಾಗಿದೆ. ಕರ್ಫ್ಯೂ ಅನುಷ್ಠಾನವನ್ನು ಸಮರ್ಪಕವಾಗಿ ಆಗುವಂತೆ ನೋಡಿಕೊಳ್ಳುವುದರ ಜೊತೆಗೆ ಕೊರೋನಾ ನಿಯಂತ್ರಣ ಮಾರ್ಗಸೂಚಿಗಳು ಪಾಲನೆಯಾಗುವಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕರು ದೈನಂದಿನ ಅಗತ್ಯ ವಸ್ತುಗಳನ್ನು ಅವಶ್ಯವಿದ್ದಲ್ಲಿ ಮಾತ್ರ  ಖರೀದಿಗೆ ಮನೆಯಿಂದ ಹೊರಬರಬೇಕು, ಇಲ್ಲವಾದಲ್ಲಿ ಮನೆಯಲ್ಲೇ ಸುರಕ್ಷಿತವಾಗಿ ಇರಬೇಕು. ಶನಿವಾರ ಮತ್ತು ಭಾನುವಾರ ಪೂರ್ಣ ಪ್ರಮಾಣದಲ್ಲಿ ಲಾಕ್‍ಡೌನ್ ಮಾಡಲು ಚಿಂತಿಸಲಾಗಿದೆ. ಆ ದಿನಗಳಲ್ಲಿ ದಿನಸಿ ಅಂಗಡಿ ತೆರೆಯಲು ಅವಕಾಶವಿರುವುದಿಲ್ಲ. ಹಾಪ್ ಕಾಮ್ಸ್, ಹಾಲಿನ ಅಂಗಡಿಗಳು, ತರಕಾರಿ, ಹಣ್ಣುಹಂಪಲು ತಳ್ಳುಗಾಡಿಗಳಿಗೆ ಅವಕಾಶ ನೀಡಲಾಗುವುದು ಎಂದರು.

ಕರ್ಫ್ಯೂ ಅವಧಿಯಲ್ಲಿ ವಾಹನಗಳಲ್ಲಿ ಸಂಚರಿಸುವವರನ್ನು ತಡೆದು ವಿಚಾರಿಸಬೇಕು. ನಕಲಿ ಗುರುತಿನ ಚೀಟಿ ತೋರಿಸುವವರು, ಅನಗತ್ಯವಾಗಿ ಸಕಾರಣವಿಲ್ಲದೆ ವಾಹನಗಳಲ್ಲಿ ಓಡಾಡುವುದು ಕಂಡುಬಂದರೆ ಅಂತಹ ವಾಹನಗಳನ್ನು ನಿರ್ದಾಕ್ಷಿಣ್ಯವಾಗಿ ಸೀಝ್ ಮಾಡಬೇಕು ಎಂದರು.

ಕೋವಿಡ್ ನಿರೋಧಕ ಚುಚ್ಚು ಮದ್ದು ಪಡೆಯಲು ತೆರಳುವವರು, ವೈದ್ಯಕೀಯ ಚಿಕಿತ್ಸೆಗೆ, ಮತ್ತಿತರ ತುರ್ತು ಕೆಲಸ ಇರುವವರು ಕಂಡುಬಂದಲ್ಲಿ ಅವರುಗಳಿಗೆ ಅವಕಾಶ ಮಾಡಿಕೊಡಬೇಕು ಎಂದರು.

ಸಂಸದ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಸಾಮಾಜಿಕ ಒಳಿತಿಗಾಗಿ ಸರ್ಕಾರ ಕೊರೋನ ಕರ್ಫ್ಯೂ ಜಾರಿಗೆ ತಂದಿದೆ. ಜನರಿಗೆ, ವ್ಯಾಪಾರಸ್ಥರಿಗೆ ಹೆಚ್ಚಿನ ಸಮಸ್ಯೆ ಆಗದಂತೆ ನೋಡಿಕೊಳ್ಳುವುದರೊಂದಿಗೆ ಲಾಕ್‍ಡೌನ್ ಜಾರಿ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಮಾತನಾಡಿ ನಿರ್ಗತಿಕರು ಹಾಗೂ ಕೆಲವು ವಲಸೆ ಕಾರ್ಮಿಕರಿಗೆ ನಗರದ ನಿರಾಶ್ರಿತ ಕೇಂದ್ರಗಳಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಬೇಕು, ಅವರುಗಳ ಆರೋಗ್ಯ ತಪಾಸಣೆಗಳನ್ನು ಸಹ ಮಾಡಿ ಇದರಿಂದ, ಡೆಂಗ್ಯೂ ಮಲೇರಿಯಾದಂತಹ ಸಾಂಕ್ರಮಿಕ ರೋಗಗಳನ್ನು ಹರಡುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Subscribe to our newsletter!

Other related posts

error: Content is protected !!