ಚಿತ್ರಕಲೆಯಲ್ಲಿ ಉನ್ನತ ಶಿಕ್ಷಣ ಮಾಡುವವರಿಗೆ ಧರ್ಮಸ್ಥಳದಿಂದ ವಿಶೇಷ ವಿದ್ಯಾರ್ಥಿ ವೇತನ: ಡಿ. ವೀರೇಂದ್ರ ಹೆಗ್ಗಡೆ
![ಚಿತ್ರಕಲೆಯಲ್ಲಿ ಉನ್ನತ ಶಿಕ್ಷಣ ಮಾಡುವವರಿಗೆ ಧರ್ಮಸ್ಥಳದಿಂದ ವಿಶೇಷ ವಿದ್ಯಾರ್ಥಿ ವೇತನ: ಡಿ. ವೀರೇಂದ್ರ ಹೆಗ್ಗಡೆ](https://thecanarapost.com/wp-content/uploads/2021/02/SDK_4289_1600x1068-850x560.jpg)
18ನೇ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಯ ಪುರಸ್ಕಾರ ಸಮಾರಂಭ
![](https://thecanarapost.com/wp-content/uploads/2021/02/SDK_4355_1600x1068.jpg)
ಧರ್ಮಸ್ಥಳ, ಫೆ 13, 2021: ಚಿತ್ರಕಲೆಯಲ್ಲಿ ಉನ್ನತ ಶಿಕ್ಷಣ ಮಾಡುವವರಿಗೆ ಧರ್ಮಸ್ಥಳದಿಂದ ವಿಶೇಷ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಶನಿವಾರ ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ 18ನೇ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂಚೆ ಕಾರ್ಡಿನಲ್ಲಿ ಕುಂಚವಾಡಿಸಿ ಆಕರ್ಷಕ ಚಿತ್ರಗಳನ್ನು ಬಿಡಿಸುವ ರಾಜ್ಯಮಟ್ಟದ ಸ್ಪರ್ಧೆಯೇ ಅಂಚೆ-ಕುಂಚ ಸ್ಪರ್ಧೆ.
![](https://thecanarapost.com/wp-content/uploads/2021/02/SDK_4289_1600x1068.jpg)
ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯ ವಿಕಸನಕ್ಕಾಗಿ ಅಂಚೆ-ಕುಂಚ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಚಿತ್ರಕಲೆಯಲ್ಲಿ ಅನುಕರಣೆ ಸಲ್ಲದು. ವಿದ್ಯಾರ್ಥಿಗಳು ವೈವಿಧ್ಯಮಯ ಅಭಿರುಚಿ ಹಾಗೂ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಡಾ ಹೆಗ್ಗಡೆ ಸಲಹೆ ನೀಡಿದರು.
ಪ್ರಶಸ್ತಿ ವಿತರಿಸಿದ ಖ್ಯಾತ ಚಲನಚಿತ್ರ ನಟ ಡಾ. ಶ್ರೀಧರ್ ಕಲೆಯಿಂದ ಮನಸ್ಸು ಅರಳುತ್ತದೆ, ಬುದ್ಧಿ ಬೆಳೆಯುತ್ತದೆ. ಮನೋವಿಕಾಸ, ಆತ್ಮೋನ್ನತಿ ಮತ್ತು ಮನೋರಂಜನೆಗಾಗಿ ಕಲೆ ಅಗತ್ಯ ಎಂದು ಹೇಳಿದರು.
ತಾನು ಆರಂಭದಲ್ಲಿ ಚಿತ್ರಕಲಾವಿದನಾಗಿ ನಂತರ ಸಂಗೀತ ಮತ್ತು ನೃತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದೆ ಎಂದು ಹೇಳಿದ ಅವರು, ಚಿತ್ರಕಲೆಯಲ್ಲಿ ಭಾವ, ಸೌಂದರ್ಯ ಮತ್ತು ತಂತ್ರಗಾರಿಕೆ ಅಡಕವಾಗಿದೆ. ಚಿತ್ರಕಲೆಗೆ ವಸ್ತುವಿನ ಆಯ್ಕೆ ಮುಖ್ಯವಾಗಿದೆ. ಮನಸ್ಸಿನ ಕಲ್ಪನೆಗಳಿಗೆ ಪ್ರಜ್ಞೆಯನ್ನು ಸೇರಿಸಿದಾಗ ಆಕರ್ಷಕ ಚಿತ್ರ ರೂಪಿಸಬಹುದು. ನೋಡಿದ ಅನುಭವವನ್ನು ಅಭಿವ್ಯಕ್ತಗೊಳಿಸಲು ಚಿತ್ರಕಲೆ ಅತ್ಯಂತ ಪರಿಣಾಮಕಾರಿ ಮಾಧ್ಯಮವಾಗಿದೆ ಎಂದು ಡಾ. ಶ್ರೀಧರ್ ಅಭಿಪ್ರಾಯಪಟ್ಟರು.
ಹೇಮಾವತಿ ವೀ. ಹೆಗ್ಗಡೆ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ಬೆಂಗಳೂರಿನ ಖ್ಯಾತ ಚಿತ್ರ ಕಲಾವಿದ ಬಾಗೂರು ಮಾರ್ಕಾಂಡೇಯ ಹಾಗೂ ಮಂಗಳೂರಿನ ಸನಾತನ ನಾಟ್ಯಾಲಯದ ಕಲಾವಿದರಿಂದ ಕುಂಚ-ಗಾನ-ನೃತ್ಯ ವೈಭವ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ ಹದಿನೆಂಟನೆ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆಯಲ್ಲಿ ವಿಜೇತರು
ಪ್ರಾಥಮಿಕ ಶಾಲಾ ವಿಭಾಗ:
- ಕುಮಾರಿ ಪ್ರತಿಷ್ಠಾ ಶೇಟ್, ವಿದ್ಯೋದಯ ಪಬ್ಲಿಕ್ ಶಾಲೆ, ಉಡುಪಿ, (ಪ್ರಥಮ),
- ಕುಮಾರಿ ಶ್ರೀಮಯಿ, ಸಿ. ಭಾರತೀಯ ವಿದ್ಯಾಭವನ ಶಾಲೆ, ವಿಜಯನಗರ ಮೈಸೂರು (ದ್ವಿತೀಯ)
- ಕುಮಾರಿ ಲಕ್ಷ್ಯ, ಪಿ.ಎನ್. ಭಾರತೀಯ ವಿದ್ಯಾಭವನ ಶಾಲೆ, ಕೊಡಗು ವಿದ್ಯಾಲಯ, ಮಡಿಕೇರಿ (ತೃತೀಯ)
ಪ್ರೌಢಶಾಲಾ ವಿಭಾಗ:
- ಪ್ರಸಾದ ಶ್ರೀಧರ ಮೇತ್ರಿ, ಕಾತ್ಯಾಯಿನಿ ಪ್ರೌಢಶಾಲೆ, ಆವರ್ಸಾ, ಅಂಕೋಲಾ (ಪ್ರಥಮ)
- ಕುಮಾರಿ ಶ್ರೇಯಾ ಆರ್. ದೇಶಪಾಂಡೆ, ಸೈಂಟ್ ಜೋಸೆಫ್ ಶಾಲೆ, ಜಯಲಕ್ಷ್ಮೀಪುರಂ ಮೈಸೂರು (ದ್ವಿತೀಯ)
- ಕುಮಾರಿ ಪ್ರತೀಕ್ಷಾ ಮರಕಿನಿ, ಪೂರ್ಣಪ್ರಜ್ಞ ಪ್ರೌಢಶಾಲೆ, ಸದಾಶಿವ ನಗರ, ಬೆಂಗಳೂರು (ತೃತೀಯ)
ಕಾಲೇಜು ವಿಭಾಗ:
- ಕುಮಾರಿ ಅನನ್ಯ ದೀಪಕ್ ನಾಯಕ್, ಸರ್ಕಾರಿ ಪದವಿಪೂರ್ವ ಕಾಲೇಜು, ಕಾರವಾರ (ಪ್ರಥಮ),
- ಅಖಿಲೇಶ್ ನಾಗೇಶ ನಾಯ್ಕ, ಶ್ರೀ ಸತ್ಯಸಾಯಿ ಪದವಿಪೂರ್ವ ಕಾಲೇಜು, ಅಳಿಕೆ (ದ್ವಿತೀಯ),
- ಜಯಪ್ರಕಾಶ್, ವಿವೇಕಾನಂದ ಕಾಲೇಜು, ಪುತ್ತೂರು (ತೃತೀಯ)
ಸಾರ್ವಜನಿಕ ವಿಭಾಗ:
- ದಿನೇಶ ದೇವರಾಯ ಮೇತ್ರಿ, ಆವರ್ಸಾ, ಅಂಕೋಲಾ, (ಪ್ರಥಮ),
- ಲಕ್ಷ್ಮೀಕಾಂತ ವಾಸುದೇವ ನಾಯ್ಕ, ಆವರ್ಸಾ, ಅಂಕೋಲಾ (ದ್ವಿತೀಯ),
- ರಾಜೇಶ್, ಡಿ.ಎಸ್. ವಾದಿರಾಜ ನಗರ, ಮಂಗಳೂರು (ತೃತೀಯ)
ನಾಲ್ಕು ವಿಭಾಗಗಳಿಂದ ಒಟ್ಟು 16,230 ಸ್ಪರ್ಧಾಳುಗಳು ಅಂಚೆ-ಕುಂಚ ಸ್ಪರ್ಧೆಯಲ್ಲಿ ಭಾಗವಹಿಸಿದರು.
ವಿಷಯ: ಸಮುದ್ರ ಕಿನಾರೆ