ಸಕ್ರೀಯ ಕ್ಷಯರೋಗ ಪತ್ತೆ ಆಂದೋಲನ

 ಸಕ್ರೀಯ ಕ್ಷಯರೋಗ ಪತ್ತೆ ಆಂದೋಲನ
Share this post


ಡಿಸೆಂಬರ್ 01 ರಿಂದ 31 ರ ವರೆಗೆ ನಡೆಯುವ ಆಂದೋಲನ

ಕ್ಷಯ ರೋಗ ಅಂದರೆ ಏನು?

ಕ್ಷಯರೋಗವು ‘ಮೈಕೋ ಬ್ಯಾಕ್ಟೇರಿಯಂ ಟ್ಯುಬರ್‍ಕ್ಯೂಲೋಸಿಸ್’ ಎಂಬ ಸೂಕ್ಷ್ಮ ರೋಗಾಣುವಿನಿಂದ ಬರುತ್ತದೆ. ಕ್ಷಯರೋಗಿಯು ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ತುಂತುರುಗಳಿಂದ ಈ ರೋಗಾಣುಗಳು ಗಾಳಿಯ ಮೂಲಕ ವ್ಯಕ್ತಿಯ ಶ್ವಾಸಕೋಶ ಸೇರಿ ಅವರಿಗೆ ಸೋಂಕು ಉಂಟಾಗುತ್ತದೆ ಹಾಗೂ ಸೋಂಕು ತಗುಲಿದ ವ್ಯಕ್ತಿಯ ರೋಗ ನಿರೋಧÀಕ ಶಕ್ತಿ ಕುಂಠಿತವಾದಾಗ ವ್ಯಕ್ತಿಯು ಕ್ಷಯರೋಗಕ್ಕೆ ತುತ್ತಾಗುತ್ತಾನೆ.

ಭಾರತದಲ್ಲಿ ಕ್ಷಯ ರೋಗ

ಜಗತ್ತಿನ ಒಟ್ಟೂ ಕ್ಷಯರೋಗಿಗಳಲ್ಲಿ ಭಾರತವು ಶೇ 25 ರಷ್ಟು ಕ್ಷಯರೋಗಿಗಳನ್ನು ಹೊಂದಿದೆ. ವಾರ್ಷಿಕವಾಗಿ ಜಗತ್ತಿನಾದ್ಯಂತ 1 ಕೋಟಿ 30 ಲಕ್ಷದಷ್ಟು ಜನರು ಟಿಬಿ ಕಾಯಿಲೆಗೆ ಗುರಿಯಾಗುತ್ತಾರೆ.

ಭಾರತದಲ್ಲಿ ಪ್ರತಿ ವರ್ಷ 27 ಲಕ್ಷ ಜನರು ಟಿಬಿ ಕಾಯಿಲೆಗೆ ಗುರಿಯಾಗುತ್ತಾರೆ ಹಾಗೂ 2.2 ಲಕ್ಷದಷ್ಟು ಜನರು ಟಿಬಿ ಕಾಯಿಲೆಯಿಂದ ಮರಣ ಹೊಂದುತ್ತಾರೆ.

ಒಬ್ಬ ಕ್ಷಯರೋಗಿ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ತನ್ನ ಪರಿಸರದಲ್ಲಿ ಸರಿ ಸುಮಾರು 10 ರಿಂದ 15 ಜನರಿಗೆ ಸೋಂಕು ಹರಡುವ ಅಪಾಯವಿದೆ ಹಾಗೂ Drug Resistant TB ರೋಗಿಯಾಗಿ ಬದಲಾಗುವ ಸಾಧ್ಯತೆ ಇರುತ್ತದೆ. ದೇಶವನ್ನು 2025 ರ ಒಳಗಾಗಿ ಕ್ಷಯ ಮುಕ್ತ ರಾಷ್ಟ್ರವನ್ನಾಗಿ ಮಾಡುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಅದರ ಒಂದು ಅಂಗವಾಗಿ ಸಕ್ರೀಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ನಡೆಸಲಾಗುತ್ತಿದೆ.

ಕ್ಷಯರೋಗ ಪತ್ತೆ ಆಂದೋಲನ
ಸದರಿ ಆಂದೋಲನವು 01 ನೇ ಡಿಸೆಂಬರ್ 2020 ರಿಂದ 31ನೇ ಡಿಸೆಂಬರ್ 2020 ರ ವರೆಗೆ ರಾಜ್ಯಾದ್ಯಂತ ಏಕ ಕಾಲಕ್ಕೆ ನಡೆಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹ ಸಕ್ರೀಯ ಕ್ಷಯರೋಗ ಪತ್ತೆ ಆಂದೋಲನವು ನಡೆಯಲಿದ್ದು ಸಮೀಕ್ಷೆ ಮಾಡುವ ಬಗ್ಗೆ ಕ್ರಿಯಾ ಯೋಜನೆ ತಯಾರಿಸಲಾಗಿರುತ್ತದೆ.

ಸಕ್ರೀಯ ಕ್ಷಯರೋಗ ಪತ್ತೆ ಆಂದೋಲನ ಎಂದರೇನು

ಸಕ್ರೀಯ ಕ್ಷಯ ಪತ್ತೆ ಆಂದೋಲನ ಅಂದರೆ ಮನೆ ಬೇಟಿ ಮಾಡುವ ಮೂಲಕ ಜನರಲ್ಲಿ ರೋಗದ ಲಕ್ಷಣ ಸಮೀಕ್ಷೆ ಮಾಡಿ ಕ್ಷಯರೋಗ ಆರಂಭಿಕ ಟಿ.ಬಿ ಪ್ರಕರಣಗಳನ್ನು ಪತ್ತೆ ಹಚ್ಚುವುದು ಹಾಗೂ ಚಿಕಿತ್ಸೆ ನೀಡುವುದು ಹಾಗೂ ಆ ಮೂಲಕ ಕ್ಷಯರೋಗ ಹರಡುವುದನ್ನು ನಿಯಂತ್ರಿಸುವುದು ಉದ್ದೇಶ ಅಗಿರುತ್ತದೆ, ಸದರಿ ಕ್ಷಯರೋಗ ಪತ್ತೆ ಆಂದೋಲವು ಜಿಲ್ಲೆಯ ಕ್ಷಯರೋಗ ತಗಲಬಹುದಾದ ಸಾಧ್ಯತೆಯಿರಬಹುದಾದ ದುರ್ಬಲ ವರ್ಗದ ಕ್ಷೇತ್ರದ ಜನರನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿದ್ದು, ಕೊಳಚೆ ಪ್ರದೇಶದ ನಿವಾಸಿಗಳು(ಸ್ಲಮ್), ಜೈಲು(ಕೈದಿಗಳು) ವೃದ್ದಾಪ್ಯ ಕೇಂದ್ರಗಳು, ಕಟ್ಟಡ ನಿರ್ಮಾಣ ಕಾರ್ಮಿಕರು, ನಿರಾಶ್ರಿತರ ಶಿಬಿರಗಳು, ವಸತಿ ಇಲ್ಲದವರು ಬೀದಿ ಮಕ್ಕಳು, ಅನಾಥಾಶ್ರಮಗಳು, ಅಸಂಘಟಿತ ಕಾರ್ಮಿಕರು, ಅಪೌಷ್ಟೀಕತೆ ಹೆಚ್ಚಿರುವ ಪ್ರದೇಶಗಳ ನಿವಾಸಿಗಳನ್ನು ಹಾಗೂ ಕ್ಷಯರೋಗಕ್ಕೆ ತುತ್ತಾಗಬಹುದಾದ ಅಪಾಯದಲ್ಲಿರುವ ಜನರ ಬಗ್ಗೆ ಹೆಚ್ಚಿನ ಗಮನ ಹರಿಸಿ ಸಮೀಕ್ಷೆಗೊಳಪಡಿಸಲಾಗುವುದು.

ಉದ್ದೇಶಿತ ಪ್ರದೇಶದ ಜನಸಂಖ್ಯೆ ಗುರಿಯಾಗಿಸಿ ಮನೆ ಬೇಟಿ ಮಾಡುವುದು. ವ್ಯಕ್ತಿಗಳ ರೋಗ ಲಕ್ಷಣಗಳ ತಪಾಸಣೆ, ರೋಗ ಲಕ್ಷಣಗಳನ್ನು ಹೊಂದಿದ ಶಂಕಿತರಿಗೆ ಕಫ ಪರೀಕ್ಷೆಗೆ ಸಲಹೆ ನೀಡುವುದು ಕಫ ಸಂಗ್ರಹಿಸಿ ಪರೀಕ್ಷೆಗೆ ರವಾನಿಸುವುದು ಹಾಗೂ ಇತರ ಅವಶ್ಯ ಪರೀಕ್ಷೆಗಳನ್ನು ಮಾಡಲಾಗುವುದು.

ಈ ಕೆಳಗಿನ ಲಕ್ಷಣಗಳನ್ನು ಹೊಂದಿರುವ ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಗುವುದು.
• ಎರಡು ವಾರ ಅಥವಾ ಅದಕ್ಕಿಂತ ಮೇಲ್ಪಟ್ಟು ಕೆಮ್ಮು
• ಜ್ವರ, ಅದರಲ್ಲೂ ಸಂಜೆ ವೇಳೆ ಜ್ವರ ಬರುವುದು
• ಎದೆ ನೋವು, ತೂಕ ಕಡಿಮೆಯಾಗುವುದು, ಹಸಿವಾಗದೇ ಇರುವುದು
• ಕಫ, ಕಫದಲ್ಲಿ ರಕ್ತ ಬೀಳುವುದು, ಕುತ್ತಿಗೆಯಲ್ಲಿ ಗಂಟುಗಳು ಕಾಣಿಸಿಕೊಳ್ಳುವುದು

ಜಿಲ್ಲೆಯಲ್ಲಿ ಆಂದೋಲನದ ರೂಪುರೇಷೆ

ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟೂ 53,279 ಮನೆಗಳನ್ನು ಸಮೀಕ್ಷೆ ಮಾಡಿ ಅವರಲ್ಲಿ ಕ್ಷಯರೋಗದ ಲಕ್ಷಣ ಕಂಡು ಬಂದಲ್ಲಿ ಕಫ ತಪಾಸಣೆ ಮಾಡುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಒಟ್ಟೂ 473 ತಂಡಗಳನ್ನು ರಚಿಸಲಾಗಿದೆ. ಪ್ರತಿ ಸಮೀಕ್ಷಾ ತಂಡದಲ್ಲಿ ಒಂದು ಅಶಾ ಹಾಗೂ ಒಬ್ಬರು ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದು ಕ್ರಿಯಾ ಯೋಜನೆಯಂತೆ ಪ್ರತಿ ಮನೆಗಳ ಬೇಟಿ ನೀಡಿ ಕ್ಷಯರೋಗದ ಬಗ್ಗೆ ಮಾಹಿತಿ ನೀಡಿ ರೋಗದ ಲಕ್ಷಣ ಇದ್ದವರಿಗೆ ಕಫ ಪರೀಕ್ಷೆ ಹಾಗೂ ಇತರೆ ಅವಶ್ಯಕ ತಪಾಸಣೆ ವ್ಯವಸ್ಥೆ ಮಾಡಲಾಗಿದೆ. ಕ್ಷಯರೋಗ ದೃಡ ಪಟ್ಟ ರೋಗಿಗಳಿಗೆ ನೇರ ನಿಗಾವಣೆ (DOTS) ಮೂಲಕ ಚಿಕಿತ್ಸೆ ಉಚಿತವಾಗಿ ನೀಡಲಾಗುವುದು.

ಕಾರವಾರ ಜಿಲ್ಲಾ ಆಸ್ಪತ್ರೆ ಮತ್ತು ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ CB NAAT ಯಂತ್ರಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದು ಕುಮಟಾ, ಹೊನ್ನಾವರ, ಭಟ್ಕಳ್, ಮುಂಡಗೋಡ, ಹಳಿಯಾಳ ತಾಲೂಕಾ ಆಸ್ಪತ್ರೆ ಹಾಗೂ ದಾಂಡೇಲಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ TRUE NAAT ಯಂತ್ರವನ್ನು ಆಳವಡಿಸಲಾಗಿರುತ್ತದೆ. ಇದರಿಂದ ಇನ್ನೂ ಹೆಚ್ಚಿನ ನಿಖರವಾದ ಕ್ಷಯರೋಗ ಪರೀಕ್ಷೆ ನಡೆಸುವುದು ಸಾಧ್ಯವಾಗಿದೆ.

ಕ್ಷಯರೋಗ ಮುಕ್ತ ಭಾರತ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ಜನಪ್ರತಿನಿಧಿಗಳು, ಸಮುದಾಯದ ಮುಖಂಡರು, ಸಾರ್ವಜನಿಕರು, ಸ್ವಯಂ ಸೇವಾ ಸಂಘ ಸಂಸ್ಥೆಯವರು, ಇತರೆ ಇಲಾಖೆಗಳು ಹಾಗೂ ಮಾದ್ಯಮ ಮಿತ್ರರು ಸಕ್ರೀಯವಾಗಿ ಭಾಗವಹಿಸಿ ಕ್ಷಯ ಮುಕ್ತ ಸಮಾಜ ನಿರ್ಮಾಣ ಮಾಡಲು ಸಹಕಾರ ನೀಡುವಂತೆ ವಿನಂತಿ.

ಡಾ. ಶರದ ನಾಯಕ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ

Also read:

Subscribe to our newsletter!

Other related posts

error: Content is protected !!