ಕೋವಿಡ್ ಟೆಸ್ಟಿಂಗ್ ಫಲಿತಾಂಶ ಶೀಘ್ರದಲ್ಲಿ ನೀಡಿ: ಕೋಟ ಶ್ರೀನಿವಾಸ ಪೂಜಾರಿ

 ಕೋವಿಡ್ ಟೆಸ್ಟಿಂಗ್ ಫಲಿತಾಂಶ ಶೀಘ್ರದಲ್ಲಿ ನೀಡಿ: ಕೋಟ ಶ್ರೀನಿವಾಸ ಪೂಜಾರಿ
Share this post

ಮಂಗಳೂರು, ಎಪ್ರಿಲ್ 30, 2021: ಕೋವಿಡ್ ಸೋಂಕಿನ ನೂತನ ಹೆಚ್ಚುವರಿ ಪರೀಕ್ಷಾ ಯಂತ್ರವನ್ನು  25 ಲಕ್ಷ ರೂ. ವೆಚ್ಚದಲ್ಲಿ ವೆನ್‍ಲಾಕ್ ಆಸ್ಪತ್ರೆಯಲ್ಲಿ ಶೀಘ್ರದಲ್ಲಿ   ಅಳವಡಿಸಲಾಗುವುದು ಎಂದು  ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಯ ಫಲಿತಾಂಶ ವಿಳಂಬವಿಲ್ಲದೇ ದೊರೆಯಬೇಕು ಎಂಬ ಉದ್ದೇಶದಿಂದ ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯಲ್ಲಿ 3 ನೇ ಹೆಚ್ಚುವರಿ ಪರೀಕ್ಷಾ  ಯಂತ್ರವನ್ನು 25 ಲಕ್ಷ ರೂ ವೆಚ್ಚದಲ್ಲಿ 3 ದಿನದ ಒಳಗಾಗಿ ಅಳವಡಿಸಲಾಗುವುದು, ಇದರಿಂದ ಹೆಚ್ಚವು ಕೋವಿಡ್ ಟೆಸ್ಟ್‍ಗಳನ್ನ  ಮಾಡಲು ಅನುಕೂಲವಾಗುತ್ತದೆ ಎಂದರು.

ಕೋವಿಡ್ ಸೋಂಕು ನಿಯಂತ್ರಣಕ್ಕೆ ಬರಬೇಕೆಂಬ ನಿಟ್ಟಿನಲ್ಲಿ ಜಾರಿಗೊಳಿಸಲಾಗಿರುವ ಕೊರೋನಾ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ನಿಯಮ ಉಲ್ಲಂಘಿಸಿದರೆ ಅವರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು  ಎಂದು  ಮುಖ್ಯಮಂತ್ರಿಗಳು ವಿಡಿಯೋ ಸಂವಾದದಲ್ಲಿ ತಿಳಿಸಿದ್ದು, ಅದನ್ನು ಜಿಲ್ಲೆಯಲ್ಲಿ ಕಟ್ಟಿನಿಟ್ಟಾಗಿ ಪಾಲಿಸಬೇಕು ಎಂದರು.

ಕೋವಿಡ್‍ನಿಂದ ಮರಣ ಹೊಂದಿದವರ  ಶವ ಸಾಗಾಣಿಕೆಗೆ ಉಚಿತ ಆಂಬುಲೆನ್ಸ್ ನೀಡುವುದರೊಂದಿಗೆ ಶವ ಸಂಸ್ಕಾರದ ವೆಚ್ಚವನ್ನು ಸಹ ಸರಕಾರವೇ ಭರಿಸಲಿದ್ದು, ಈ ಕೂಡಲೇ ತಾಲೂಕಿನ ತಹಸೀಲ್ದಾರ್ ಗಳಿಗೆ  ಹಣ ಬಿಡುಗಡೆ ಮಾಡಲು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಕೊರೋನಾ ಕರ್ಫ್ಯೂನಿಂದಾಗಿ ನಗರ ಪ್ರದೇಶದಿಂದ ಜನರು ಗ್ರಾಮಗಳತ್ತ ವಲಸೆ ಬರುತ್ತಿದ್ದಾರೆ. ಅವರುಗಳಿಂದ ಸೋಂಕು ಇತರರಿಗೆ ಹರಡುವ ಸಾಧ್ಯತೆ ಇರುತ್ತದೆ. ಇವುಗಳ ನಿಯಂತ್ರಣಕ್ಕೆ ಗ್ರಾಮಗಳ ಮಟ್ಟದಲ್ಲಿ ಟಾಸ್ಕ್ ಫೋರ್ಸ್‍ಗಳನ್ನು ರಚನೆ ಮಾಡುವುದರೊಂದಿಗೆ ಕಾಳಜಿ ವಹಿಸಬೇಕು,  ರೋಗ ಇತರರಿಗೆ ಹರಡದಂತೆ ಎಚ್ಚರ ವಹಿಸಬೇಕು ಎಂದರು.

ಕೋವಿಡ್ ಟೆಸ್ಟ್ಗಳನ್ನು ಮಾಡುವುದು ವಿಳಂಬವಾಗುವ ಸಂದರ್ಭವಿದ್ದಲ್ಲಿ ಅಗತ್ಯವೆಂದು ಕಂಡುಬಂದಾಗ ಖಾಸಗಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಮಾಡಲು ಸರಕಾರದ ಅನುಮತಿ ಪಡೆದು ಪರೀಕ್ಷೆಗಳನ್ನು ಮಾಡಲು ಮುಂದಾಗಬೇಕು.

ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿರುವವರಿಗೆ ಉತ್ತಮ ಚಿಕಿತ್ಸೆ ನೀಡುವುದರ ಜೊತೆಗೆ ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಗುರುತಿಸಿ, ಅವರನ್ನು ಹೋಂ ಕ್ವಾರಂಟೈನ್ ಇಡುವುದರ ಜೊತೆಗೆ ಮೊಬೈಲ್ ಸ್ವ್ಯಾಬ್ ಟೆಸ್ಟಿಂಗ್ ವಾಹನಗಳನ್ನು ಅವರಿದ್ದಲ್ಲಿಯೇ ಕೊಂಡೊಯ್ದು ಕೋವಿಡ್ ಟೆಸ್ಟ್ ಮಾಡಲು ಮುಂದಾಗಬೇಕು ಎಂದು ಸೂಚನೆ ನೀಡಿದರು.

ತಾಲೂಕು ಕೇಂದ್ರದ ಕೋವಿಡ್ ಆಸ್ಪತ್ರೆಗಳಲ್ಲಿ 50 ಐಸಿಯು ಘಟಕಗಳನ್ನು ಸ್ಥಾಪಿಸಿ, ಚಿಕಿತ್ಸೆ ನೀಡಬೇಕು. ಇದರಿಂದಾಗಿ ಜಿಲ್ಲಾ ಮಟ್ಟದ ಕೋವಿಡ್ ಕೇಂದ್ರಗಳಲ್ಲಿ ಒತ್ತಡ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಶಾಸಕ ರಾಜೇಶ್ ನಾಯ್ಕ್, ಕುಟುಂಬ ಕಲ್ಯಾಣ ಅಧಿಕಾರಿ ಕಿಶೋರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!